ನಾಪೋಕ್ಲು: ಕೊಡಗು ಜಿಲ್ಲೆಯಾದ್ಯಂತ ಸುಗ್ಗಿಯ ಹಬ್ಬ ‘ಹುತ್ತರಿ’ಯನ್ನು ಡಿ. 7ರಂದು ಆಚರಿಸಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಬುಧವಾರ ದಿನ ನಿಗದಿಪಡಿಸಲಾಯಿತು.
ಪಾಡಿ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ನಾಡಿನ ಹದಿಮೂರು ತಕ್ಕಮುಖ್ಯಸ್ಥರು, ದೇವಾಲಯದ ಭಕ್ತಜನ ಸಂಘದ ಅಧ್ಯಕ್ಷ ಮತ್ತು ಪದಾಧಿ ಕಾರಿಗಳು, ದೇವಾಲಯದ ಆಡಳಿತ ಅಧಿಕಾರಿಗಳು, ಊರಿನ ಗಣ್ಯರು ಸಂಪ್ರದಾಯದಂತೆ ದೇವಾಲಯದ ಅಮ್ಮಂಗೇರಿ ಜ್ಯೋತಿಷ್ಯರಾದ ಶಶಿಕುಮಾರ್ ಮತ್ತು ನಾಣಯ್ಯ, ಜೀವನ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದರು.
ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನವಾದ ಡಿ. 7 ಬುಧವಾರ ರಾತ್ರಿ 7.20 ಗಂಟೆಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, 8.20 ಗಂಟೆಗೆ ಕದಿರು ತೆಗೆಯು ವುದು ಮತ್ತು 9.20 ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಘಳಿಗೆಯಾಗಿ ರುವುದನ್ನು ನಿರ್ಧರಿಸ ಲಾಯಿತು. ಈ ಸಮಯವು ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆಯುತ್ತದೆ.
ಸಾರ್ವಜನಿಕರು ಅಂದು ರಾತ್ರಿ 7.50ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ತೆಗೆಯುವುದು ಮತ್ತು 9.50ಕ್ಕೆ ಪ್ರಸಾದ ಸ್ವೀಕರಿಸುವ ಸಮಯವನ್ನು ನಿಗದಿ ಮಾಡಲಾಯಿತು.
ಹುತ್ತರಿಗೆ ಮುನ್ನಾ ದಿನವಾದ ಡಿ. 6ರಂದು ಮಂಗಳವಾರ ಕೃತ್ತಿಕಾ ನಕ್ಷತ್ರದಲ್ಲಿ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕಲಾಡ್ಚ ಹಬ್ಬವನ್ನು ಆಚರಿಸಲು ದಿನ ನಿಗದಿಪಡಿಸಲಾಯಿತು. ಈ ಸಂದರ್ಭ ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಹಾಗೂ ತಕ್ಕಮುಖ್ಯಸ್ಥರು ಮಾತನಾಡಿ, ದೇವಾಲಯದ ಕಟ್ಟುಪಾಡುಗಳನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಸಮಸ್ತ ಭಕ್ತರು ಅನುಸರಿಸಿ ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.
ದೇವರ ಆದಿ ಸ್ಥಳ ಮಲ್ಮ ಬೆಟ್ಟದಲ್ಲಿ ಪಾಡಿ, ನೆಲಜಿ, ಪೇರೂರು, ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಒಟ್ಟು ಸೇರಿ ವಿಧಿ ವಿಧಾನವನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಿ ದೇವರ ಕಟ್ಟು ವಿಧಿಸಲಾಯಿತು. ಇಂದಿನಿಂದ ಕಲ್ಲಾಡ್ಚ ಹಬ್ಬದವರೆಗೆ ಕೊಡಗಿನ ಸಮಸ್ತ ಭಕ್ತರು ದೇವಾಲಯದ ಆಚಾರ, ವಿಚಾರ, ಪದ್ಧತಿ, ನಿಯಮಗಳನ್ನು ಶ್ರದ್ಧಾ ಭಕ್ತಿಯಿಂದ ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಲಾಯಿತು.
ಪಾರು ಪತ್ತೆಗಾರ ಪ್ರಿನ್ಸ್ ತಮ್ಮಪ್ಪ, ಕಂದಾಯ ನಿರೀಕ್ಷಕ ರವಿಕುಮಾರ್, ಪರದಂಡ ಸುಮನ್, ಕಲಿಯಂಡ ರಾಜ ತಮ್ಮಯ್ಯ ಕುಟ್ಟಂಚೆಟ್ಟೀರ ಶಾಮ್, ಪರದಂಡ ಮುದ್ದು ಸುಬ್ರಮಣಿ, ಪೇರಿಯಂಡ ಪಾಪು ಪೂವಯ್ಯ, ಪರದಂಡ ಶಂಭು ಕಲಿಯಂಡ ಅಪ್ಪಾ ಸ್ವಾಮಿ, ಪರದಂಡ ತಮ್ಮಯ್ಯ ಕೇಟೋಳಿರ ಕುಟ್ಟಪ್ಪ, ಕೆಟೋಳಿರ ಸನ್ನಿ, ಚರುಮಂದಂಡ ನಾಣಯ್ಯ ಇದ್ದರು. ಈ ಸಂದರ್ಭ ದೇವಾಲಯದ ಅರ್ಚಕ ಜಗದೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.