ಮಡಿಕೇರಿ: ಇಲ್ಲಿನ ಅಬ್ಬಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಬಾಯ್ದೆರೆದುಕೊಂಡಿದ್ದ ಕಬ್ಬಿಣದ ನೆಲಹಾಸು ಹಾಗೂ ಮುರಿದಿದ್ದ ತಡೆಗೋಡೆಗೆ ತಂತಿ ಹಾಕಿ ಸಮೀಪ ಯಾರೂ ಸುಳಿಯದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಜುಲೈ 11ರಂದು ‘ಪ್ರಜಾವಾಣಿ’ ‘ಅಬ್ಬಿ ಜಲಪಾತದ ವೀಕ್ಷಣಾ ಗೋಪುರ ಶಿಥಿಲ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಪರಿಶೀಲನೆ ನಡೆಸಿದರು.
ವೀಕ್ಷಣಾ ಗೋಪುರ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜಲಪಾತದ ಸಿಬ್ಬಂದಿಗೆ ಶೌಚಾಲಯ ನಿರ್ಮಿಸುವ ಭರವಸೆಯನ್ನೂ ನೀಡಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹಾಗೂ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ‘ವೀಕ್ಷಣಾ ಗೋಪುರ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.