ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದೆ. ಭಾನುವಾರ ರಾತ್ರಿ ಇಡೀ ಬಿರುಸಾಗಿ ಜಿಲ್ಲೆಯ ಹಲವೆಡೆ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಗಾಳಿಯೂ ರಭಸದಿಂದ ಬೀಸುತ್ತಿದ್ದು, ಶನಿವಾರಸಂತೆ- ಚಂಗಡಳ್ಳಿ ರಸ್ತೆ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತು. ಕೂಡಲೆ ಸ್ಥಳಕ್ಕೆ ಧಾವಿಸಿದ ತುರ್ತು ಸ್ಪಂದನಾ ತಂಡದ ಕಾರ್ಯಕರ್ತರು ಮರವನ್ನು ತೆರವುಗೊಳಿಸಿದರು.
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಇನ್ನೂ ತಗ್ಗಿಲ್ಲ. ಸೋಮವಾರ ಬೆಳಿಗ್ಗೆ 12,500 ಕ್ಯುಸೆಕ್ ನೀರು ಜಲಾಶಯಕ್ಕೆ ಬರುತ್ತಿತ್ತು. ಈಗಾಗಲೇ ಜಲಾಶಯ ತುಂಬಿರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.