ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50 ಸಾವಿರ ಲಂಚ ಪಡೆಯುತ್ತಿದ್ದ ಆರೋಪ: ಲೋಕಾಯುಕ್ತ ಬಲೆಗೆ ಬಿದ್ದ ಡಿಸಿಎಫ್‌

ಅಧೀನ ಸಿಬ್ಬಂದಿಯಿಂದಲೇ ತನ್ನ ಜೀಪಿಗೆ ಲಂಚದ ಹಣ ಹಾಕುವಂತೆ ಸೂಚನೆ ನೀಡಿದ್ದ ಅಧಿಕಾರಿ
Last Updated 9 ಮಾರ್ಚ್ 2023, 14:06 IST
ಅಕ್ಷರ ಗಾತ್ರ

ಮಡಿಕೇರಿ: ತನ್ನ ಅಧೀನ ಅಧಿಕಾರಿಯೊಬ್ಬರಿಂದ ₹ 50 ಸಾವಿರ ಲಂಚ ಪಡೆಯುತ್ತಿದ್ದ ಆರೋಪ ಮೇರೆಗೆ ಇಲ್ಲಿನ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್‌ ಪೂರ್ಣಿಮಾ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇಲಾಖೆಯಿಂದ ₹ 1.60 ಲಕ್ಷ ವೆಚ್ಚದಲ್ಲಿ 2 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಶೇ 60ರಷ್ಟು ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು. ಈ ಕಾಮಗಾರಿಯನ್ನು ಲಂಚ ಪಡೆಯದೇ ಕೈಗೊಂಡಿರುವುದಾಗಿ ಹೇಳಿದರೂ ₹ 1 ಲಕ್ಷ ಹಣ ನೀಡಬೇಕು. ಇಲ್ಲದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಅವರು ತನ್ನ ಅಧೀನ ಅಧಿಕಾರಿಗೆ ಒಡ್ಡಿದ್ದರು.

ಇದರ ಮುಂಗಡ ಹಣವಾಗಿ ₹ 50 ಸಾವಿರವನ್ನು ಅರಣ್ಯ ಭವನದ ಮುಂಭಾಗ ಇರುವ ತನ್ನ ಜೀಪಿನಲ್ಲಿ ಹಾಕುವಂತೆ ಪೂರ್ಣಿಮಾ ಸೂಚಿಸಿದ್ದರು. ಅದರಂತೆ ಅಧೀನ ಅಧಿಕಾರಿಯು ಗುರುವಾರ ಸಂಜೆ ಜೀಪಿನಲ್ಲಿ ಲಂಚದ ಹಣ ಹಾಕುತ್ತಿದ್ದಂತೆ ಪೂರ್ಣಿಮಾ ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಹೊದ್ದೂರು ವೋಟೆಕಾಡು ನರ್ಸರಿಯಲ್ಲಿ ವಾಚರ್‌ ಒಬ್ಬರನ್ನು ನೇಮಿಸಿಕೊಂಡಂತೆ ದಾಖಲಾತಿ ಸೃಷ್ಟಿಸಿ ವಾಚರ್‌ಗೆ ನೀಡಲಾಗುವ ಮಾಸಿಕ ₹ 15 ಸಾವಿರ ವೇತನವನ್ನು ತನಗೆ ನೀಡುವಂತೆಯೂ ಪೂರ್ಣಿಮಾ ತನ್ನ ಅಧೀನ ಅಧಿಕಾರಿಗೆ ಹೇಳಿದ್ದರು. ಇದಕ್ಕೆ ಒಪ್ಪದಿದ್ದಾಗ ಸಾರ್ವಜನಿಕವಾಗಿ ತನ್ನನ್ನು ನಿಂದಿಸುತ್ತಿದ್ದರು ಎಂದು ಅಧೀನ ಅಧಿಕಾರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೈಸೂರು ವಿಭಾಗದ ಲೋಕಾಯುಕ್ತ ಎಸ್‌.ಪಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ, ಮೈಸೂರಿನ ಡಿವೈಎಸ್‌ಪಿ ಕೃಷ್ಣಯ್ಯ, ಮಡಿಕೇರಿಯ ಡಿವೈಎಸ್‌ಪಿ ಪವನ್‌ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಜಯರತ್ನಾ, ಸಿಬ್ಬಂದಿಯಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್‌ಕುಮಾರ್, ಶಶಿ, ತ್ರಿವೇಣಿ, ಪ್ರಕಾಶ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT