ಮಡಿಕೇರಿ: ಶೋಷಿತ ಸಮಾಜಗಳಿಗೆ ಅರಿವಿನ ಬೆಳಕು ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಎಂದು ಸಾಹಿತಿ ಟಿ.ಪಿ.ರಮೇಶ್ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಕುಲದ ಏಕತೆಗಾಗಿ ಮತ್ತು ಸಮ ಸಮಾಜ ನಿರ್ಮಾಣಕ್ಕಾಗಿ ಇವರಿಬ್ಬರೂ ಶ್ರಮಿಸಿದರು. ಒಂದೇ ಧರ್ಮ, ಒಂದೇ ದೇವರು ಎಂದು ಸಾರಿದ್ದಾರೆ. ಎಲ್ಲರೂ ಸಮಾಜ ಮುಖಿಯಾಗಿ ಬದುಕಬೇಕು ಎಂಬುದು ಇವರ ಆಶಯವಾಗಿತ್ತು ಎಂದು ಹೇಳಿದರು.
ಮೂಢನಂಬಿಕೆ, ಅಜ್ಞಾನದ ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸಿದರು. ತತ್ವ ನಿಷ್ಠೆ, ಸತ್ಯನಿಷ್ಠೆ ಮೂಲಕ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ಅವರು ಸಾರಿದ್ದಾರೆ ಎಂದು ವಿವರಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಅವರು 1854ರಲ್ಲಿ ತಿರುವನಂತಪುರ ಬಳಿಯ ಚಂಬಾಳತಿ ಎಂಬಲ್ಲಿ ಜನಿಸಿದರು. ಆಧ್ಯಾತ್ಮಕದ ಮೂಲಕ ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದರು. 1888ರಲ್ಲಿ ತಿರುವಂತಪುರದ ಅರವಿಪುರಂನಿಂದ ಜಾಗೃತಿ ಆಂದೋಲನ ಹಮ್ಮಿಕೊಂಡು ದೇವಾಲಯಗಳಿಗೆ ಎಲ್ಲರ ಪ್ರವೇಶಕ್ಕೆ ಅವಕಾಶ ನೀಡಿದರು. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹತ್ತಾರು ದೇವಾಲಯಗಳನ್ನು ನಿರ್ಮಿಸಿ ದೇವಾಲಯ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಮಾಡಿದರು ಎಂದರು.
ಮತ ಸುಧಾರಣೆ ಮತ್ತು ಸಮಾಜ ಸುಧಾರಣೆಯ ಯೋಜಿತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡುವುದು ನಾರಾಯಣಗುರು ಅವರ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ 1903 ರಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್ಎನ್ಡಿಪಿ) ಅಸ್ತಿತ್ವಕ್ಕೆ ತಂದರು ಎಂದು ಹೇಳಿದರು.
ನುಲಿಯ ಚಂದಯ್ಯ ಅವರು ವಿಜಯಪುರ ಜಿಲ್ಲೆಯ ಶಿವಣಗಿಯಲ್ಲಿ 1160 ರಲ್ಲಿ ಜನಿಸಿದರು. ಇವರ ಅಂಕಿತ ನಾಮ ಚಂದೇಶ್ವರಲಿಂಗ. ಹಗ್ಗ ಹೊಸೆದು ಮಾರುವುದು ಇವರ ಕಾಯಕ. ಇವರು 48ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಕಾಯಕ ನಿಷ್ಠೆ ಮತ್ತು ಜಂಗಮ ದಾಸೋಹ ಗಮರ್ನಾಹವಾಗಿದೆ. ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು ಮತ್ತು ಅವರ ಜೊತೆ ಕೈ ಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು ಎಂದು ಟಿ.ಪಿ.ರಮೇಶ್ ತಿಳಿಸಿದರು.
ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ. ಇವರ ನಡೆ ನುಡಿ ಕಾಯಕನಿಷ್ಠೆ ಪುರಾಣ ಕಥೆಗಳಲ್ಲಿ ವರ್ಣಿತವಾಗಿವೆ. ಹುಲ್ಲನ್ನು ಕೊಯ್ದು, ಅದರಿಂದ ನಾರು ತೆಗೆದು, ನಾರನ್ನು ನುಲಿದು, ಹಗ್ಗಮಾಡಿ ಅದನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು ಎಂದು ಅವರು ನುಡಿದರು.
ಮಡಿಕೇರಿ ತಾಲ್ಲೂಕು ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ‘ವಿದ್ಯೆಯಿಂದ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ನಾರಾಯಣಗುರು ಅವರು ಸಾರಿದ್ದಾರೆ’ ಎಂದರು.
ಕುಳುವ ಸಮಾಜದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್ ಮಾತನಾಡಿ, ‘ನುಲಿಯ ಚಂದಯ್ಯ ಅವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು’ ಎಂದರು.
ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜಿಲ್ಲಾ ಸಹ ಕಾರ್ಯದರ್ಶಿ ಬೊಳ್ಳಜ್ಜೀರ ಬಿ.ಅಯ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕಲಾವಿದರಾದ ಬಿ.ಸಿ.ಶಂಕರಯ್ಯ ಇದ್ದರು.ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಅವರ ಆದರ್ಶ ಮತ್ತು ಜೀವನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಅವರಂತೆ ನಡೆದುಕೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು ವರ್ಣಿತ್ ನೇಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಅವರ ಆದರ್ಶ ಮತ್ತು ಜೀವನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಅವರಂತೆ ನಡೆದುಕೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು-ವರ್ಣಿತ್ ನೇಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಶರಣರು ಹಾಗೂ ದಾಸರ ಪರಂಪರೆಯನ್ನು ತಿಳಿದುಕೊಂಡು ಮುನ್ನಡೆಯಬೇಕು-ಜವರಪ್ಪ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.