ಮಡಿಕೇರಿ: ರಾಜ್ಯ ಬಜೆಟ್ ಅನ್ನು ಫೆ. 8ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸುತ್ತಿದ್ದು ಕೊಡಗಿನ ಅಭಿವೃದ್ಧಿಗೆ ಪೂರಕ ಯೋಜನೆ ಘೋಷಿಸಲಾಗುವುದು ಎಂದು ಉಸ್ತುವಾರಿ ಸಚಿವಸಾ.ರಾ.ಮಹೇಶ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಭೂಕುಸಿತದಿಂದ ಪ್ರವಾಸೋದ್ಯಮಕ್ಕೆ ತೊಂದರೆ ಆಗಿತ್ತು. ಪ್ರವಾಸಿ ಉತ್ಸವದಿಂದ ಮತ್ತೆ ಕೊಡಗಿಗೆ ಹೆಚ್ಚು ಪ್ರವಾಸಿಗರು ಬರಲು ಆರಂಭಿಸಿದ್ದಾರೆ ಎಂದು ಮಹೇಶ್ ತಿಳಿಸಿದರು.
ನಗರದ ಕೋಟೆ, ರಾಜಾಸೀಟ್, ಕೊಡವ ಹೆರಿಟೇಜ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಮಳೆಯಿಂದ ಆದ ದುರಂತದಿಂದ ಇನ್ನೂ ನಿರಾಶ್ರಿತರು ಹೊರಬಂದಿಲ್ಲ. ದುರಂತ ಆದ ತಕ್ಷಣದಿಂದಲೇ ತಾತ್ಕಾಲಿಕಪರಿಹಾರ ಕಾರ್ಯಗಳು ಸರ್ಕಾರದಿಂದ ವೇಗವಾಗಿ ನಡೆದಿದೆ. ಆದರೆ, ಶಾಶ್ವತ ಪರಿಹಾರ ಕಾಮಗಾರಿಗೆ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸಬೇಕು. ಹೀಗಾಗಿ, ಕೆಲಸಗಳು ನಿಧಾನಗತಿಯಲ್ಲಿ ಆಗುತ್ತಿವೆ ಎಂದು ಹೇಳಿದರು.
ಟೀಕೆ–ಟಿಪ್ಪಣಿ ಸಹಜ: ಯಾವುದೇ ಯೋಜನೆಗಳನ್ನು ಮಾಡುವುದಕ್ಕೆ ಮೊದಲು ಟೀಕೆ–ಟಿಪ್ಪಣಿ ಸಹಜ. ಮೊದಲ ಹಂತದಲ್ಲಿ ನಿವೇಶನ ಹುಡುಕುವ ಕೆಲಸ ಜಿಲ್ಲಾಡಳಿತ ವೇಗವಾಗಿ ಮಾಡಿದೆ. ಇನ್ನು ಮನೆಗಳ ನಿರ್ಮಾಣ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬಆಗುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಮೋಂತಿಗಣೇಶ್ ಮಾತನಾಡಿ, ಕೊಡಗಿನಲ್ಲಿ ರೆಸಾರ್ಟ್ಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ನಗರದಲ್ಲಿ ಕೇವಲ 2 ಸಾರ್ವಜನಿಕ ಶೌಚಾಲಯಗಳಿವೆ ಇವುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕೋರಿದರು.
ಸಂವಾದದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಮನು ಶಣೈ, ಜೆಡಿಎಸ್ ಮುಖಂಡ ಕೆ.ಎಂ.ಗಣೇಶ್ ಇದ್ದರು.