ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತರಿಗೆ ಸೌಲಭ್ಯ ನೀಡಲು ಒತ್ತು

ಚಿನ್ನ, ಬೆಳ್ಳಿ ಕುಶಲಕರ್ಮಿಗಳಿಗೆ ತರಬೇತಿಗೆ ಶಾಸಕ ಚಾಲನೆ
Last Updated 8 ಮಾರ್ಚ್ 2019, 12:14 IST
ಅಕ್ಷರ ಗಾತ್ರ

ಮಡಿಕೇರಿ: ‘ಚಿನ್ನ ಹಾಗೂ ಬೆಳ್ಳಿ ಕುಶಲಕರ್ಮಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಶುಕ್ರವಾರ ಸಲಹೆ ಮಾಡಿದರು.

ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯ ಹಾಗೂ ಕೊಡಗು ಅಕ್ಕಸಾಲಿಗ ಕಾರ್ಮಿಕ ಒಕ್ಕೂಟ ಶುಕ್ರವಾರ ಬಾಲಭವನದಲ್ಲಿ ಆಯೋಜಿಸಿದ್ದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

‘ಚಿನ್ನದ ಗಟ್ಟಿಗೆ ನೂರುಪೆಟ್ಟು ನೀಡಿ ಕುಶಲಕರ್ಮಿಗಳು ಆಕರ್ಷಣೆ, ಹೊಳಪು ನೀಡಿ ಆಭರಣ ತಯಾರಿಸುತ್ತಾರೆ. ಚಿನ್ನಾಭರಣ ಆಕರ್ಷಕವಾಗಿ ಇಲ್ಲದಿದ್ದರೆ ಧರಿಸುವುದಿಲ್ಲ. ಆಕರ್ಷಣೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಅಸಂಘಟಿತ ವಲಯಕ್ಕೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ವಿಮೆ, ಪರಿಹಾರಧನ ಹಾಗೂ ₹ 3 ಲಕ್ಷದ ತನಕ ಚಿಕಿತ್ಸೆ ವೆಚ್ಚ ಭರಿಸುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಪ್ರಮಾಣ ಪತ್ರ ವಿತರಣೆಯಿಂದ ಅಕ್ಕಸಾಲಿಗರಿಗೆ ಅನುಕೂಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಒಂದುವೇಳೆ ಆಕಸ್ಮಿಕ ಘಟನೆಗಳು, ಪರಿಹಾರದ ಸೌಲಭ್ಯ ಸಿಗಲಿದೆ’ ಎಂದು ಮಾಹಿತಿ ನೀಡಿದರು.

‘ಚಿನ್ನ, ಬೆಳ್ಳಿ ವರ್ತಕರ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಹಿಂದೆ ಕುಶಲಕರ್ಮಿಗಳು ಕೊಡಗಿನ ಆಭರಣಗಳನ್ನು ಮಾತ್ರ ತಯಾರಿಸುತ್ತಿದ್ದರು. ಆದರೆ, ಇಂದು ಎಲ್ಲ ಬಗೆಯ ಆಭರಣಗಳನ್ನೂ ತಯಾರಿಸುತ್ತಿದ್ದಾರೆ. ಕೊಡಗಿನ ಚಿನ್ನಾಭರಣ ವ್ಯಾಪಾರಿಗಳು ಅತ್ಯಂತ ಪ್ರಮಾಣಿಕರು’ ಎಂದು ಶ್ಲಾಘಿಸಿದರು.

ಗೋಲ್ಡ್‌ ಸ್ಮಿತ್‌ ಅಕಾಡೆಮಿಯ ಉಮೇಶ್‌ ಆಚಾರ್ಯ ಮಾತನಾಡಿ, ‘ಕುಶಲಕರ್ಮಿಗಳಿಗೆ ಪೂರ್ವ ಕಲಿಕೆ ಗುರುತಿಸುವಿಕೆ ಪ್ರಮಾಣ ಪತ್ರ ವಿತರಣೆಯಿಂದ ಸೌಲಭ್ಯ ಪಡೆಯಲು ಅನುಕೂಲ ಆಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಅಡಿ 32 ಕ್ಷೇತ್ರಗಳು ಬರುತ್ತವೆ. ಕೃಷಿ, ಟೈಲರಿಂಗ್‌ ಹಾಗೂ ಕ್ರೀಡೆ. 13ನೇ ವಿಭಾಗದಲ್ಲಿ ಕುಶಲಕರ್ಮಿಗಳಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗಿತ್ತು. ಕರ್ನಾಟಕದ ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ, ಮಂಗಳೂರಿನಲ್ಲಿ ತರಬೇತಿ ನೀಡಲಾಗಿದೆ’ ಎಂದು ಹೇಳಿದರು.

ಪದವೀಧರರಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ಕುಶಲಕರ್ಮಿಗಳಿಗೂ ಪ್ರಮಾಣಪತ್ರ ವಿತರಣೆಗೆ ಸರ್ಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಕ ಸಾಲಿಗ ಕಾರ್ಮಿಕ ಒಕ್ಕೂಟದ ಕೆ.ರವಿ ಆಚಾರ್ಯ, ಜಿಲ್ಲಾ ಚಿನ್ನ ಮತ್ತು ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT