ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅದು ಅರಣ್ಯ ಇಲಾಖೆಗೆ ಸೇರಿದ ಜಾಗ. ಅರಣ್ಯಾಧಿಕಾರಿಗಳೇ ಸ್ಪಷ್ಟಪಡಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಅಧಿಕಾರಿಯ ಬಂಧನವಾಗಿಲ್ಲ. ತನಿಖೆ ನಡೆಸಿ ಆ ಅಧಿಕಾರಿಯನ್ನು ಬಂಧಿಸಬೇಕಿತ್ತು. ಆತ ಪ್ರಭಾವಿಯಿರುವ ಕಾರಣಕ್ಕೆ ವಿಳಂಬವಾಗುತ್ತಿದೆ. ಕೂಡಲೇ ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಪರಿಹಾರ ಧನ ಪಡೆದ ಅಧಿಕಾರಿ:
‘2018ರಲ್ಲಿ ಕೊಡಗಿನ ಉತ್ತರ ಭಾಗದಲ್ಲಿ ಜಲಪ್ರಳಯ ಸಂಭವಿಸಿತ್ತು. ಅಂದು ಸಂತ್ರಸ್ತರಾದ ಎಷ್ಟೋ ಮಂದಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ಈ ಕಂದಾಯ ಅಧಿಕಾರಿ, ₹ 32 ಸಾವಿರದಷ್ಟು ಪರಿಹಾರವನ್ನು ಎರಡು ಕಂತಿನಲ್ಲಿ ಪಡೆದುಕೊಂಡಿದ್ದಾರೆ. ಚೇರಂಗಾಲ ಗ್ರಾಮಸ್ಥರ ಬಳಿ ಆ ದಾಖಲೆಗಳೂ ಇವೆ’ ಎಂದು ಮಾಹಿತಿ ನೀಡಿದರು.