ಮಡಿಕೇರಿ: ‘ಸೇವ್ ಕೊಡಗು ಸಂಘಟನೆ’ಯು ಫೆ. 11ರಂದು ಗೋಣಿಕೊಪ್ಪದಲ್ಲಿ ಪರಿಸರವಾದಿಗಳ ವಿರುದ್ಧ ಹಮ್ಮಿಕೊಂಡಿರುವ ಹೋರಾಟಕ್ಕೆ ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಈ.ರ.ದುರ್ಗಾಪ್ರಸಾದ್ ವಿರೋಧ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೇವ್ ಕೊಡಗು ಬಿಜೆಪಿ ಮುಷ್ಟಿಯಲ್ಲಿದೆ’ ಎಂದು ಗಂಭೀರ ಆರೋಪ ಮಾಡಿದರು.
‘ಕೊಡಗಿಗೆ ರೈಲು ಬರಬಾರದು. ಪರಿಸರ ಸೂಕ್ಷ್ಮ ವಲಯ ಜಾರಿಯಾಗಬೇಕು. ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ನಿಲುವು ಪರಿಸರವಾದಿಗಳದ್ದು ಮಾತ್ರವಲ್ಲ; ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳೂ ಇದರಲ್ಲಿ ಭಾಗಿಯಾದ್ದಾರೆ’ ಎಂದು ದೂರಿದರು.
‘ಪ್ರತಿಯೊಬ್ಬರಿಗೂ ತಮ್ಮ ನಿಲುವು ಮಂಡಿಸುವ ಹಕ್ಕಿದೆ. ಆದರೆ, ಜಿಲ್ಲೆಯ ಜನಾಭಿಪ್ರಾಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಅಭಿವೃದ್ಧಿ ಹೆಸರಲ್ಲಿ ಹಣವನ್ನು ಲೂಟಿ ಮಾಡುವ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಚ್.ಪಿ.ರಮೇಶ್, ಎ.ಸಿ.ಸಾಬು ಇದ್ದರು.