ಮಡಿಕೇರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾತ್ಯತೀತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಟೀಕಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಎಸ್ಪಿ ಹಾಗೂ ಬಿಜೆಪಿ ದಲಿತರನ್ನು ವಿರೋಧಿಸುತ್ತಿವೆ. 6 ದಶಕಗಳಿಂದ ಉಳಿಸಿ, ಬೆಳೆಸಿದ ಸಂವಿಧಾನವನ್ನು ರಕ್ಷಿಸುವ ಸನ್ನಿವೇಶ ದೇಶದಲ್ಲಿ ಸೃಷ್ಟಿಯಾಗಿದೆ’ ಎಂದು ಆರೋಪಿಸಿದರು.
‘ಕೋಮುವಾದಿ ಪಕ್ಷಗಳಿಗೆ ಮತ್ತು ಸಂವಿಧಾನ ವಿರೋಧಿಗಳಿಗೆ ಬೆಂಬಲ ನೀಡಬೇಡಿ. ಸಂವಿಧಾನ ಉಳಿಯಬೇಕಾದರೆ ಕೋಮುವಾದಿ ಪಕ್ಷಗಳಿಗೆ ಪ್ರಜ್ಞಾವಂತರು ಮತ ಹಾಕಬಾರದು’ ಎಂದು ಕೋರಿದರು.
‘ಮತ್ತೆ ಕೊಡಗಿನ ಜನರು ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರನ್ನೇ ಗೆಲ್ಲಿಸಿದರೆ ಜಿಲ್ಲೆಯ ಜನರು ಮತ್ತೆ ಸಂಕಷ್ಟದ ದಿನಗಳನ್ನು ನೋಡಬೇಕಿದೆ’ ಎಂದು ಟೀಕಿಸಿದರು.
‘ಪ್ರಧಾನಿ ನರೇಂದ್ರ ಮೋದಿ ನೋಟ್ಬ್ಯಾನ್ ಹೆಸರಿನಲ್ಲಿ ದೇಶದ ಜನಸಾಮಾನ್ಯರ ರೈತರ, ಕಾರ್ಮಿಕರ ಬದುಕನ್ನೇ ವಿನಾಶದತ್ತ ಕೊಂಡೊಯ್ದಿದ್ದಾರೆ. ಇದಲ್ಲದೇ ದೇಶವನ್ನು ಹಿಂದೂರಾಷ್ಟ್ರ ಮಾಡಲು ಕೆಲ ನಾಯಕರು ಹೊರಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಶೇ 60 ಯುವಕರಿದ್ದಾರೆ. ಆದರೆ, ಮೋದಿ ಯುವಕರನ್ನು ಚುನಾವಣೆಗೆ ಬಳಸಿಕೊಳ್ಳಲು ಯಶಸ್ವಿಯಾಗಿದ್ದಾರೆ ಹೊರತು ಸ್ವಉದ್ಯೋಗ ಸೃಷ್ಟಿ, ನಿರುದ್ಯೋಗ ಸಮಸ್ಯೆಯ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ’ ಎಂದು ದೂರಿದರು.
ಜಿಎಸ್ಟಿ ಜಾರಿಯಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನಷ್ಟವಾಗಿದೆ ಎಂದು ದೂರಿದರು.
‘ವಿದೇಶದಲ್ಲಿದ್ದ ಕಪ್ಪು ಹಣವನ್ನು ವಾಪಸ್ ತಂದು ಪ್ರತಿಯೊಬ್ಬನ ಬ್ಯಾಂಕ್ ಖಾತೆಗೆ ನೀಡುತ್ತೇನೆ ಎನ್ನುವ ಭರವಸೆ ಸುಳ್ಳಾಗಿದೆ’ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪ್ರೊ.ಶಬೀರ್ ಮುಸ್ತಫಾ ಮಾತನಾಡಿ, ‘ದೇಶಕ್ಕೆ ಸಂವಿಧಾನ ಬದಲಾಯಿಸುವ ಸರ್ಕಾರ ಬೇಕಿಲ್ಲ. ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತ ವಿರೋಧ ನೀತಿಗಳನ್ನು ಅನುಸರಿಸುವ ಮಾರ್ಗ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ಮೈಸೂರು ಅಧ್ಯಕ್ಷ ಶಾಂತರಾಜು, ರೇವಣ್ಣ ಹಾಜರಿದ್ದರು.