ಮಡಿಕೇರಿ: ಪ್ರಜಾಕೀಯ ಪಕ್ಷದಲ್ಲಿ ಪ್ರಣಾಳಿಕೆ ಇಲ್ಲ. ಜನರು ನೀಡುವ ಹೇಳಿಕೆಯೇ ಪ್ರಣಾಳಿಕೆಯಾಗಲಿದೆ. ಜನರು ನೀಡುವ ಸಲಹೆ, ಸೂಚನೆಯಂತೆ ಅಧಿಕಾರ ನಡೆಸಲಾಗುವುದು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿ. ಆಶಾರಾಣಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಗಿನ ಜನರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸಲು ಇಲ್ಲಿಯ ಮತದಾರರು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ನಟ ಉಪೇಂದ್ರ ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷದಿಂದ ಮೈಸೂರು ಸೇರಿದಂತೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೊಡಗಿನ ಅಭಿವೃದ್ಧಿಗೂ ಪಕ್ಷ ಸಹಕರಿಸಲಿದೆ ಎಂದು ಹೇಳಿದರು.
ಪಕ್ಷದ ಗುರುತು ‘ಆಟೊರಿಕ್ಷಾ’. ಜತೆಗೆ, ಖಾಕಿ ತೊಡುವ ಕಾರ್ಮಿಕನ ರೀತಿಯಲ್ಲಿ ಸತ್ಯ, ನಿಷ್ಠೆಯಿಂದ ಜನರ ಮಧ್ಯೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಎಂದು ಕೋರಿದರು.
‘ನಮ್ಮದು ರಾಜಕೀಯ ಪಕ್ಷವಲ್ಲ. ಜನಾಡಳಿತ ಪಕ್ಷವಾಗಿ ಬೆಳೆಯಬೇಕು. ಹಣ, ಜಾತಿ, ತೋಳ್ಬಲದಿಂದ ಗೆಲ್ಲುತ್ತಿಲ್ಲ. ರಾಷ್ಟ್ರದ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲು ಕಾರ್ಮಿಕರಂತೆ ಸೇವೆ ಮಾಡಲಾಗುವುದು’ ಎಂದು ಆಶಾರಾಣಿ ಪ್ರತಿಪಾದಿಸಿದರು.