ಮಡಿಕೇರಿ: ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ಕೊಡಗು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಸೋಮವಾರ ಮುನ್ನೆಚ್ಚರಿಕಾ ಕ್ರಮವಾಗಿ ರಾಜಾಸೀಟ್ ಸೇರಿದಂತೆ ವಿವಿಧೆಡೆ ವಿಧ್ವಂಸಕ ಪತ್ತೆದಳ ಸಿಬ್ಬಂದಿ ತಪಾಸಣೆ ನಡೆಸಿದರು.
ಬಸ್ ನಿಲ್ದಾಣ, ಆಕಾಶವಾಣಿ ಕೇಂದ್ರ, ನ್ಯಾಯಾಲಯ, ಜಿಲ್ಲಾಡಳಿತ ಸಂಕೀರ್ಣದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಗಾವಲು ಮುಂದುವರಿದಿದೆ.
ಶ್ವಾನದಳ ಸೇರಿದಂತೆ ವಿಧ್ವಂಸಕ ಕೃತ್ಯ ತಪಾಸಣಾ ತಂಡ ನಗರದಲ್ಲಿಯೂ ಕಾರ್ಯನ್ಮುಖವಾಗಿದೆ. ಭಾನುವಾರ ಹಾರಂಗಿ ಜಲಾಶಯ, ಕುಶಾಲನಗರ ಬಸ್ ನಿಲ್ದಾಣ, ನ್ಯಾಯಾಲಯ ಆವರಣ, ಸೋಮವಾರಪೇಟೆಯ ಬಸ್ ನಿಲ್ದಾಣ, ನ್ಯಾಯಾಲಯ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಈ ತಂಡವು ಪರಿಶೀಲನೆ ನಡೆಸಿತ್ತು.