ಮಡಿಕೇರಿ: 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರುಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಯೋಗ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗ ದಿನಾಚರಣೆಯನ್ನು ನಗರದ ಮೈತ್ರಿ ಹಾಲ್ನಲ್ಲಿ ಯೋಗ ದಿನಾಚರಣೆ ಆಚರಿಸಲು ಉದ್ದೇಶಿಸಲಾಗಿದ್ದು, ತಾಲ್ಲೂಕುಮಟ್ಟ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಯೋಗ ದಿನಾಚರಣೆ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಚ್. ರಾಮಚಂದ್ರ ತಿಳಿಸಿದರು.
ಜೂನ್ 18ರಂದು ಸಂಜೆ 6ರಿಂದ 7ರವರೆಗೆ ಯೋಗ ಜಾಥಾ ಹಮ್ಮಿಕೊಂಡಿದ್ದು, ಜಾಥಾವು ನಗರದ ಕೋಟೆ ಆವರಣದಿಂದ ಪ್ರಾರಂಭಗೊಂಡು ನಗರದ ಹಳೇ ಬಸ್ ನಿಲ್ದಾಣದ ತನಕ ನಡೆಯಲಿದೆ. ಈ ಬಾರಿಯ ಯೋಗ ದಿನಾಚರಣೆ ಘೋಷ ವಾಕ್ಯ ‘ಹೃದಯಕ್ಕಾಗಿ ಯೋಗ’ ಎಂದು ಮಾಹಿತಿ ನೀಡಿದರು.
21ರಂದು ಬೆಳಿಗ್ಗೆ 6.30ಕ್ಕೆ ಮೈತ್ರಿಹಾಲ್ನಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಿಗ್ಗೆ 7ರಿಂದ 8ರವರೆಗೆ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 22 ಯೋಗಾಸನಗಳು ಹಾಗೂ 4 ಪ್ರಾಣಾಯಾಮ ನಡೆಯಲಿದೆ ಎಂದು ರಾಮಚಂದ್ರ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿಎಚ್ಒ ಡಾ.ಕೆ. ಮೋಹನ್, ಆಯುಷ್ ವೈದ್ಯೆ ಡಾ.ಶುಭಾ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕುಲಕರ್ಣಿ, ಭಾರತೀಯ ವಿದ್ಯಾಭವನದ ಮಹೇಶ್ ಕುಮಾರ್ ಹಾಜರಿದ್ದರು.