ನಗರದ ಇಂದಿರಾ ಗಾಂಧಿ (ಚೌಕಿ) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಯುವಕನ ಸಾವಿಗೆ ಕಾರಣರಾದ ಬೈಲುಕುಪ್ಪೆ ಠಾಣೆಯ ಪಿಎಸ್ಐ, ಎಎಸ್ಐ, ಬೆಟ್ಟದಪುರ ಠಾಣೆಯ ಪಿಎಸ್ಐ, ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಬೇಕು ಎಂದು ಪಟ್ಟು ಹೀಡಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಡಾ.ದಿಲೀಪ್ ಅವರ ಕೊಲೆ ನಡೆದಿತ್ತು. ಈ ಕೊಲೆ ಸಂಬಂಧ ನನ್ನನ್ನು ವಿಚಾರಣೆಗೆ ಕರೆದೊಯ್ದು ಆರೋಪ ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಾಯಿಸಿ, ಕಿರುಕುಳ ನೀಡಿದ್ದರು’ ಎಂದು ಮೃತ ಜಯಕುಮಾರ್ ತಂದೆ ಕೃಷ್ಣ ದೂರಿದರು.