ಮಡಿಕೇರಿ: ‘ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಸಮುದಾಯ ಜನರು ಕೈಜೋಡಿಸಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಕೋರಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ದಾಖಲೆಯಲ್ಲಿ ಕೊಡವರ ಸಂಪ್ರದಾಯ, ಆಚಾರ– ವಿಚಾರ, ಸಂಸ್ಕೃತಿಗೆ ಪೂರಕವಾದ ದಾಖಲೆಗಳನ್ನು ಕ್ರೋಡೀಕರಿಸುವ ಕೆಲಸ ನಡೆಯುತ್ತಿದೆ. ಕೊಡವ ಸಮುದಾಯ ಜನರು ಅಗತ್ಯ ಮಾಹಿತಿ ನೀಡಬೇಕು ಎಂದು ಕೋರಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ತಿಂಗಳ ಒಳಗಾಗಿ ಸರ್ವೇ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿದೇರ್ಶಕ ಡಾ.ಬಸವನಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಡಾ.ಮಧುಸೂದನ್ ನೇತೃತ್ವದಲ್ಲಿ ಮಡಿಕೇರಿ ತಾಲ್ಲೂಕಿನ ಕಾಲೂರು ಮತ್ತು ಸೋಮವಾರಪೇಟೆಯ ಸೂಲರ್ಬಿಯಲ್ಲಿ ಆರಂಭ ಸರ್ವೆ ಕಾರ್ಯವು ಪೂರ್ಣಗೊಂಡಿದೆ. ಮೂರು ತಾಲ್ಲೂಕುಗಳಿಗೆ 3 ಸಂಶೋಧನಾ ತಂಡಗಳು ಭೇಟಿ ನೀಡಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಎನ್ಸಿ ಸದಸ್ಯ ಪುಲ್ಲೇರ ಕಾಳಪ್ಪ ಹಾಜರಿದ್ದರು.