ಶನಿವಾರಸಂತೆ: ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಈ ಸರ್ಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಮೈತ್ರಿ ಪಕ್ಷದ ಲೋಕಸಭಾ ಅಭ್ಯರ್ಥಿ ವಿಜಯಶಂಕರ್ ಗೆಲುವಿಗೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಕರೆ ನೀಡಿದರು.
ಸಮೀಪದ ಆಲೂರು–ಸಿದ್ದಾಪುರ ಸಮುದಾಯ ಭವನದಲ್ಲಿ ಶನಿವಾರಸಂತೆ ಹೋಬಳಿಯ ಆಲೂರು–ಸಿದ್ಧಾಪುರ-ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್-ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಎಂ.ಎ.ಆದಿಲ್ ಪಾಶ ಮಾತನಾಡಿ, ಪ್ರಧಾನಮಂತ್ರಿ ಮೋದಿ ಕಳೆದ 5 ವರ್ಷಗಳಿಂದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಬಂದರು. ಕೊಡಗು ಪ್ರಕೃತಿ ವಿಕೋಪಕ್ಕೆ ಒಳಗಾದಾಗ ಕೊಡಗಿಗೆ ಭೇಟಿ ನೀಡದೇ ಮಲತಾಯಿ ಧೋರಣೆ ಅನುಸರಿಸಿದರು. ಇಂದು ಕಾಫಿ, ಕಾಳುಮೆಣಸು ಬೆಳೆಗಾರರ, ರೈತರ, ಕಾರ್ಮಿಕರ ಸ್ಥಿತಿ ಅಧೋಗತಿಗೆ ಇಳಿಯಲು ಮೋದಿ ಸರ್ಕಾರವೇ ಕಾರಣವಾಗಿದೆ. ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಮುಖಂಡ ಪಾಪಣ್ಣ ಮಾತನಾಡಿ, ‘ರಾಜ್ಯ ಸರ್ಕಾರ ಬಲಗೊಳ್ಳಲು ರಾಜ್ಯದಲ್ಲಿ ಅತಿ ಹೆಚ್ಚು ಸಮ್ಮಿಶ್ರ ಅಭ್ಯರ್ಥಿಗಳು ಆರಿಸಿ ಬರಬೇಕಿದೆ. ಆ ನಿಟ್ಟಿನಲ್ಲಿ ಅಭ್ಯರ್ಥಿ ವಿಜಯಶಂಕರ್ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.