ಮಡಿಕೇರಿ: ‘ಅಭ್ಯತ್ಮಂಗಲದ ಅಯ್ಯಪ್ಪ ದೇವರಕಾಡು ಒತ್ತುವರಿದಾರರಿಗೆ ಕಾನೂನು ಬಾಹಿರವಾಗಿ ಮೂಲಸೌಲಭ್ಯ ಒದಗಿಸುವಂತೆ ಜಿಲ್ಲೆಯ ಶಾಸಕರೊಬ್ಬರು ಆದೇಶಿಸಿದ್ದು, ಅದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ವಾಲ್ನೂರು ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್ ಎಚ್ಚರಿಸಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಡಾ.ಬಿ.ಸಿ.ನಂಜಪ್ಪ ಮಾತನಾಡಿ, ‘ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಾನೂನು ಉಲ್ಲಂಘಿಸುವಂತೆ ಒತ್ತಡ ಹೇರಿದ್ದಾರೆ; ಇದು ಅರಣ್ಯಕಾಯ್ದೆ ಉಲ್ಲಂಘನೆ ಆಗಿದೆ’ ಎಂದು ಹೇಳಿದರು.
‘ಶಾಸಕರು ಕ್ಷಮೆ ಯಾಚಿಸಬೇಕು. ದೇವರಕಾಡಿನಲ್ಲಿ ಯಾವುದೇ ಅಕ್ರಮ, ನಿಯಮ ಬಾಹಿರ ಕಾರ್ಯಕ್ಕೆ ಅವಕಾಶ ನೀಡುವುದಿಲ್ ಎಂದು ಲಿಖಿತ ಹೇಳಿಕೆ ಕೊಡಬೇಕು. ಅದಕ್ಕೆ ತಪ್ಪಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ತಲಕಾವೇರಿ, ಭಾಗಮಂಡಲ ಕ್ಷೇತ್ರಗಳು ಪಾವಿತ್ರ್ಯ ಕಳೆದುಕೊಳ್ಳುತ್ತಿವೆ. ಬ್ರಹ್ಮಗಿರಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಮುತ್ತಣ್ಣ, ಟ್ರಸ್ಟಿ ಎ.ವಿ.ಕಾರ್ಯಪ್ಪ, ಗ್ರಾಮಸ್ಥ ಕೆ.ಎಂ.ರಂಜನ್ ಸುಬ್ಬಯ್ಯ ಇದ್ದರು.