ಮಡಿಕೇರಿ: ಕೃಷಿ ಪಂಪ್ಸೆಟ್ಗೆ ನೀಡುತ್ತಿರುವ ಉಚಿತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು ಎಂದು ಸುಂಟಿಕೊಪ್ಪ ಹೋಬಳಿ ಕೃಷಿಕರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಸುಂಟಿಕೊಪ್ಪ ಹೋಬಳಿ ವಿಎಸ್ಎಸ್ಎನ್ ಅಧ್ಯಕ್ಷ ಎನ್.ಸಿ.ಪೊನ್ನಪ್ಪ ಮಾತನಾಡಿ, ‘ರಾಜ್ಯ ಸರ್ಕಾರವು ಕೆಲವು ವರ್ಷಗಳಿಂದ ಕೃಷಿ ಉಪಯೋಗಕ್ಕಾಗಿ 10 ಎಚ್.ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಒದಗಿಸುತ್ತಿತ್ತು. ಆದರೆ, ಇದೀಗ ಏಕಾಏಕಿ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ’ ಎಂದು ದೂರಿದರು.
ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ರೈತಪರವೆಂದು ಹೇಳಿಕೊಳ್ಳುವ ಮೈತ್ರಿ ಸರ್ಕಾರವು ರೈತರಿಗೆ ವಂಚಿಸುತ್ತಿದೆ ಎಂದು ಆಪಾದಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಪಿ. ನಿಂಗಪ್ಪ ಮಾತನಾಡಿ, ‘ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾಗಿ ಕೃಷಿಕರು ಅಪಾರ ನಷ್ಟ ಅನುಭವಿಸಿದ್ದಾರೆ. ಯಾವುದೇ, ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಇದುವರೆಗೂ ಯಾವ ರೀತಿಯ ವ್ಯವಸ್ಥೆ ಇತ್ತೋ ಅದೇ ರೀತಿ ಸೌಲಭ್ಯ ಮುಂದುವರೆಸಬೇಕು’ ಎಂದು ಆಗ್ರಹಿಸಿದರು.