ಮಡಿಕೇರಿ: ಅಲ್ಪಾವಧಿ ಬೆಳೆ ಸಾಲ ಪಡೆದ ಕೊಡಗಿನ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಆಗ್ರಹಿಸಿದರು.
ಜಿಲ್ಲೆಯ ರೈತರ ಸಾಲ ಪರಿವರ್ತನೆ ಸಂಬಂಧ ಹಲವು ತೊಡಕುಗಳಿವೆ. ಸರ್ಕಾರವು ಈ ಸಂಬಂಧ ಪರಿಶೀಲಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಗ್ರಹಿಸಿದರು.
ಅತಿವೃಷ್ಟಿಪೀಡಿತ ರೈತರಿಗೆ ಅನುಕೂಲವಾಗುವಂತೆ 2018ರ ಜುಲೈ 10ಕ್ಕೆ ಬಾಕಿ ಉಳಿಸಿಕೊಂಡ ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಮಧ್ಯಮಾವಧಿಕೃಷಿ ಸಾಲಗಾರರ ಪರಿವರ್ತಿತ ಸಾಲಕ್ಕೆ ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಅಲ್ಪಾವಧಿ ಬೆಳೆ ಸಾಲ ಉಳಿಸಿಕೊಂಡ ರೈತರಿಗೆ ರಾಜ್ಯ ಸರ್ಕಾರ ಗರಿಷ್ಠ ₹1 ಲಕ್ಷದ ತನಕ ಮನ್ನಾ ಸೌಲಭ್ಯ ಘೋಷಿಸಿದೆ. ಸಾಲ ಪರಿವರ್ತನೆ ಮಾಡುವ ಮೂಲಕ ಮುಂದಿನ 5 ವರ್ಷಗಳ ಅವಧಿ ಸಾಲವಾಗಿ ಪರಿವರ್ತಿಸಿದಲ್ಲಿಸಾಲಮನ್ನಾ ಸೌಲಭ್ಯದಿಂದಲೂ ವಂಚಿತರಾಗುವುದಲ್ಲದೆ, ರೈತರಿಗೆ ಹೆಚ್ಚಿನ ಬಡ್ಡಿ ಹೊರೆ ಬೀಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎನ್. ಕುಮಾರಪ್ಪ, ಸಂಪತ್, ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ನಟರಾಜ್ ಹಾಜರಿದ್ದರು.