ಮಡಿಕೇರಿ: ಸಮೀಪದ ಕೆಳಗಿನ ಮೇಕೇರಿಯಲ್ಲಿ ಭಾನುವಾರ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಯಿಲೆಯಿಂದ ಬಳಲುತ್ತಿದ್ದ ಉಷಾ ಅವರನ್ನು ಅವರ ಮನೆಯಲ್ಲೇ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಚಿನ್ನದ ಚೈನ್, ಕಿವಿಯೋಲೆ, ಉಂಗುರ ಹಾಗೂ ನಗದು ಕಳವು ಮಾಡಲಾಗಿತ್ತು. ಉಷಾ ಅವರ ಸಹೋದರ ಚರಣ್ ಕುಮಾರ್ ಅವರು ದೂರು ನೀಡಿದ ಬೆನ್ನಲ್ಲೇ ತಂಡ ರಚಿಸಲಾಗಿತ್ತು.
ಸೋಮವಾರಪೇಟೆ ಬಸ್ ನಿಲ್ದಾಣದಲ್ಲಿ ಅಬ್ಬೂರುಕಟ್ಟೆ ಗ್ರಾಮದ ಲಿಖಿತಾ ಹಾಗೂ ಎಂ.ಎಸ್. ರವಿ ಅವರನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಆರೋಪಿಗಳು 15 ದಿನಗಳಿಂದ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದರು ಎಂದು ಎಸ್ಪಿ ತಿಳಿಸಿದರು. ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಬಂಧನ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೂಕು ಕಳವು ಮಾಡಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಕಕ್ಕಬ್ಬೆ ಸಮೀಪದ ನಾಲಾಡಿ ಗ್ರಾಮದ ಕೆ.ಸಿ. ಅಶೋಕ ಬಂಧಿತ ಆರೋಪಿ. ಬಂಧಿತನಿಂದ ಬಂದೂಕು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.