ಸುಂಟಿಕೊಪ್ಪ: ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ‘ಖೇಲೊ ಇಂಡಿಯಾ ಕ್ರೀಡಾಕೂಟ’ದ ಬ್ಯಾಸ್ಕೆಟ್ಬಾಲ್ ಟೂರ್ನಿಗೆ ಕೊಡಗು ಜಿಲ್ಲೆ ಸುಂಟಿಕೊಪ್ಪದ ಕೆ.ರಕ್ಷಿತ್ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದೇ 15ರಿಂದ 17 ವರ್ಷದೊಳಗಿನ ಕ್ರೀಡಾಕೂಟವು ನಡೆಯಲಿದೆ.
ರಾಜ್ಯ ತಂಡವನ್ನು ಪ್ರತಿನಿಧಿಸಿರುವ ರಕ್ಷಿತ್ ಜ. 12ರಂದು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇಲ್ಲಿನ ಹೊಸ ಬಡಾವಣೆ ನಿವಾಸಿ ಕೆ.ಎಸ್. ಅನಿಲ್ ಕುಮಾರ್ ಮತ್ತು ನಿಮಿಷಾ ದಂಪತಿ ಪುತ್ರ ರಕ್ಷಿತ್.
ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವಾಗಲೇ ಶಾಲೆಯ ಅಂದಿನ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಗಿರೀಶ್ ಅವರು ಈತನ ಆಟದ ಚಾಣಕ್ಷತೆ ನೋಡಿ ಬ್ಯಾಸ್ಕೆಟ್ಬಾಲ್ ಕ್ರೀಡೆಯತ್ತ ಗಮನ ಹರಿಸುವಂತೆ ಹೇಳಿದ್ದರು. ಅದನ್ನೇ ಛಲವಾಗಿ ತೆಗೆದುಕೊಂಡ ರಕ್ಷಿತ್ ಹಂತಹಂತವಾಗಿ ಮೇಲೆರುತ್ತಾ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.
ಪೊನ್ನಂಪೇಟೆಯಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ವಿಭಾಗದ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ 2 ಬಾರಿ ಜಯಿಸಿ, ಮಂಡ್ಯದಲ್ಲಿ ನಡೆದ ವಿಭಾಗೀಯಮಟ್ಟಕ್ಕೂ ಆಯ್ಕೆಯಾಗಿದ್ದರು.ಮಡಿಕೇರಿಯಲ್ಲಿ ನಡೆದ ಪ್ರೌಡಶಾಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆ ಪ್ರದರ್ಶನವೇ ಮಂಡ್ಯದಲ್ಲಿ ನಡೆದ ವಿಭಾಗೀಯಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಗೆ ಮೂರು ಬಾರಿ ಆಯ್ಕೆಯಾಗುವಂತೆ ಮಾಡಿತ್ತು.
ಬೆಂಗಳೂರಿನ ಕ್ರೀಡಾವಸತಿ ನಿಲಯದಲ್ಲಿದ್ದಾಗ 16 ವರ್ಷದೊಳಗಿನ ರಾಷ್ಟ್ರೀಯಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಗೂ 16 ಮಂದಿಯಲ್ಲಿ ರಕ್ಷಿತ್ ಸ್ಥಾನ ಪಡೆದುಕೊಂಡಿದ್ದರು. ಆದರೆ, ತರಬೇತಿ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಗುಳಿಯಬೇಕಾಯಿತು.
ರಕ್ಷಿತ್ಗೆ ಫುಟ್ಬಾಲ್, ಕ್ರಿಕೆಟ್ ಸಹ ಅಚ್ಚುಮೆಚ್ಚಿನ ಕ್ರೀಡೆ.ಪ್ರಸ್ತುತ ಬೆಂಗಳೂರಿನ ಸುರನಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ.
‘ಚಿಕ್ಕ ವಯಸ್ಸಿನಲ್ಲಿ ಟೆನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುತ್ತಿದ್ದ. ಬಳಿಕ ಮೊಬೈಲ್ ಮತ್ತು ಸ್ಪೋಟ್ಸ್ ವಾಹಿನಿ ವೀಕ್ಷಿಸುತ್ತಲೇ ಬ್ಯಾಸ್ಕೆಟ್ಬಾಲ್ ಆಟದ ಕೌಶಲ ಕರಗತ ಮಾಡಿಕೊಂಡ. ಆಗ ಬೇಸರವಾಗುತ್ತಿತ್ತು. ಈಗ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ’ ಎಂದು ತಂದೆ ಕೆ.ಎಸ್. ಅನಿಲ್ ಕುನಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.