ಗೋಣಿಕೊಪ್ಪಲು: ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ, ಸನ್ಮಾನ ಮಾಡುವುದು ಸಾಮಾನ್ಯ. ಆದರೆ ಸೀಮಂತ ಕಾರ್ಯಕ್ರಮಕ್ಕೆ ಇಲ್ಲಿನ ಕಾವೇರಿ ಕಾಲೇಜಿನ ಎಂ.ಕಾಂ.ಸ್ನಾತಕೋತ್ತರ ಕೇಂದ್ರ ಸಾಕ್ಷಿಯಾಯಿತು.
ಎಂ.ಕಾಂ. ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಿನಿ ಅವರ ಸೀಮಂತ ಕಾರ್ಯಕ್ರಮ ಗುರುವಾರ ನಡೆಯಿತು.
ಪಾಲಿಬೆಟ್ಟದ ಶಾಲಿನಿ ಅವರಿಗೆ ಸಹಪಾಠಿಗಳು ಹಾಗೂ ಉಪನ್ಯಾಸಕರು ಶಾಸ್ತ್ರೋಕ್ತವಾಗಿ ಉಡಿತುಂಬಿದರು.
‘ವಿವಾಹವಾದ ಮೇಲೂ ಹೆಣ್ಣುಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳಿಸಿರುವುದು ಶ್ಲಾಘನೀಯ. ಆದ್ದರಿಂದ ಕಾಲೇಜಿನಲ್ಲಿ ಅವರಿಗೆ ಸೀಮಂತ ಮಾಡಲಾಯಿತು ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಆರ್.ಉಷಾಲತಾ ತಿಳಿಸಿದರು.
ಪತಿ ಎಚ್.ಎಸ್.ಸಯಾಜ್, ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥೆ ಡಾ.ಬೀನಾ, ಸಹಾಯಕ ಪ್ರಾಧ್ಯಾಪಕರಾದ ಮುದ್ದಪ್ಪ, ನಿತ್ಯಾ, ನಿರ್ಮಲಾ ಹಾಜರಿದ್ದರು.