ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಕೊಲೆ

ವಿರಾಜಪೇಟೆ (ಕೊಡಗು ಜಿಲ್ಲೆ): ಇಲ್ಲಿನ ಪಂಜರ್ಪೇಟೆಯ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಶಫೀಕ್ (42) ಅವರನ್ನು ಮಂಗಳವಾರ ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಕೊಲೆ ನಡೆದ ಕೆಲವೇ ಕ್ಷಣಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಎಂ. ದರ್ಶನ್, ತಮಿಳರ ಜೀವನ್, ಕಾರ್ಮಿಕ ರೋಯಲ್ ಬಂಧಿತರು.
ದರ್ಶನ್ ಹಾಗೂ ಶಫೀಕ್ ಇಬ್ಬರೂ ಸ್ನೇಹಿತರು. ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಕಾಫಿ ಖರೀದಿ ವ್ಯವಹಾರವನ್ನು ಒಟ್ಟಿಗೆ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಶಫೀಕ್ಗೆ ಸೇರಿದ್ದ ಕಾಫಿ ತೋಟವನ್ನೂ ದರ್ಶನ್ ಖರೀದಿಸಿದ್ದರು. ಹಣಕಾಸು ವಿಚಾರದಲ್ಲಿ ಇಬ್ಬರ ನಡುವೆಯೂ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ಮಂಗಳವಾರ ರಾತ್ರಿ ಮನೆಯಲ್ಲಿ ಶಫೀಕ್ ಒಬ್ಬರೇ ಇರುವುದನ್ನು ಗಮನಿಸಿದ ದರ್ಶನ್ ಮತ್ತು ತಂಡ ಮನೆಗೆ ನುಗ್ಗಿ ಕೊಲೆ ಮಾಡಿದೆ. ಸುಳಿವು ಪತ್ತೆ ಹಚ್ಚಲು ಸಾಧ್ಯವಾಗದಂತೆ ಶವದ ಮೇಲೆ ಟಿಎಂಟಿ ಕ್ರಿಮಿನಾಶಕ ಸಿಂಪಡಿಸಿದ್ದರು.
ಕೂಗಾಟ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬಾಗಿಲು ಒಡೆದು ಮನೆಯಲ್ಲಿ ಅವಿತು ಕುಳಿತಿದ್ದ ಮೂವರನ್ನೂ ಬಂಧಿಸಿದ್ದಾರೆ. ಬಂಧಿತ ತಮಿಳರ ಜೀವನ್ 7 ವರ್ಷಗಳ ಹಿಂದೆ ಕೊಡವ ಸಮಾಜದ ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಎಸಗಲು ಬಳಸಿದ ಕಾರು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬರಹ ಇಷ್ಟವಾಯಿತೆ?
1
1
0
0
0
0 comments
View All