ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂದಲ್‌ಪಟ್ಟಿ: ಜೀಪು ಚಾಲಕರ ‘ಸಂಘರ್ಷ’

ಬಾಡಿಗೆ ದರ ಸಮರ, ಗೊಂದಲ ಸೃಷ್ಟಿ – ಜಿಲ್ಲಾಡಳಿತದ ಮಧ್ಯ ಪ್ರವೇಶಕ್ಕೆ ಒತ್ತಾಯ
Last Updated 5 ಡಿಸೆಂಬರ್ 2021, 12:46 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮಾಂದಲ್ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ನಿರುದ್ಯೋಗಿ ಯುವಕರು ಬಾಡಿಗೆ ಜೀಪು ಚಾಲನೆಯ ಮೂಲಕ ಬದುಕು ಕಂಡುಕೊಂಡಿದ್ದಾರೆ. ಆದರೆ, ಬಾಡಿಗೆ ದರ ಸಮರದಿಂದ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದು, ಚಾಲಕರ ನಡುವೆ ಕಲಹ ಏರ್ಪಡುತ್ತಿದೆ. ಇದರಿಂದ ಕೊಡಗಿನ ಪ್ರವಾಸಿತಾಣಗಳ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹೇಳಿದ್ದಾರೆ.

ನಿತ್ಯ ದುಡಿದು ಜೀವನ ಸಾಗಿಸುವ ಚಾಲಕರುಗಳು ಪೊಲೀಸ್ ಠಾಣೆಗಳಲ್ಲಿ ದಿನ ಕಳೆಯುವಂತಾಗಬಾರದು. ಬಾಡಿಗೆ ದರ ಸಮರದಿಂದ ಮಾಂದಲ್ ಪಟ್ಟಿ ಭಾಗದಲ್ಲಿ ನಿತ್ಯ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಇದು ಪುನರಾವರ್ತನೆ ಆಗದಂತೆ ತಡೆಯಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿದ್ದಾರೆ.

ಬಹಿಷ್ಕಾರ ಸರಿಯಲ್ಲ:

ಚಾಲಕರು ಕಲಹದ ನಡುವೆಯೇ ಕೆಲವು ಸ್ಥಳೀಯರು ಮಡಿಕೇರಿ ನಗರದ ಯಾವುದೇ ಬಾಡಿಗೆ ವಾಹನಗಳು ಬರಬಾರದೆಂದು ಬಹಿಷ್ಕಾರ ಹಾಕಿರುವ ಕುರಿತು ಆರೋಪ ಕೇಳಿ ಬಂದಿದೆ. ಆದರೆ, ಪ್ರತಿಯೊಬ್ಬರಿಗೂ ಪ್ರತಿಯೊಂದು ಕಡೆ ದುಡಿದು ಬದುಕುವ ಹಕ್ಕಿದ್ದು, ಇದಕ್ಕೆ ತಡೆಯೊಡ್ಡುವುದು ಕಾನೂನು ಬಾಹಿರ ಕ್ರಮವಾಗುತ್ತದೆ ಎಂದು ಪವನ್‌ ತಿಳಿಸಿದ್ದಾರೆ.

ಬಹಿಷ್ಕಾರದಂತಹ ಕ್ರಮಗಳಿಂದ ಸಂಘರ್ಷಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಪೊಲೀಸ್ ಇಲಾಖೆ ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ಕೈಗೊಳ್ಳಬೇಕು. ಉಭಯ ಕಡೆಯವರ ಸಭೆ ನಡೆಸಿ ಶಾಂತಿಯ ವಾತಾವರಣ ಸೃಷ್ಟಿಸಬೇಕು ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT