ಮಡಿಕೇರಿ: ಕೊಡಗು ಜಲಪ್ರಳಯದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡುವ ನೆಪದಲ್ಲಿ ಬೆಂಗಳೂರಿನ ಏಳ್ನಾಡ್ಕೊಡವ ಸಂಘದ ಕೆಲವು ಸದಸ್ಯರು ಲಕ್ಷಗಟ್ಟಲೆ ಹಣ ದುರುಪಯೋಗ ಮಾಡಿದ್ದಾರೆ ಎಂದು ಸಂಘದ ಸ್ಥಾಪಕ ಅಧ್ಯಕ್ಷ ಯು.ಎಂ.ಮುದಯ್ಯ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾರ್ವಜನಿಕರಿಂದ ಹಣ ಸಂಗ್ರಹಿಸಿ 4 ತಿಂಗಳೂ ಕಳೆದರೂ ಸಂತ್ರಸ್ತರಿಗೆ ವಿತರಿಸಿಲ್ಲ. ಹಣ ದುರುಪಯೋಗ ಮಾಡಲಾಗಿದೆ. ಈ ಸಂಬಂಧ ಸಂಘದ ಮೂವರ ವಿರುದ್ಧ ಬೆಂಗಳೂರು ಪಶ್ಚಿಮವಿಭಾಗದ ಡಿಸಿಪಿ ಅವರಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
ಸಂತ್ರಸ್ತರಿಗೆಂದು ಸಂಗ್ರಹಿಸಿದ ಸ್ವಲ್ಪ ಪ್ರಮಾಣದ ಹಣ ಮಾತ್ರ ಬ್ಯಾಂಕಿನ ಖಾತೆಗೆ ಜಮೆ ಮಾಡಿದ್ದಾರೆ. ಬಾಕಿ ಬಹುಪಾಲು ಹಣ, ಸಂತ್ರಸ್ತರಿಗಾಗಿ ಬಂದ ಸಾಮಗ್ರಿಗಳನ್ನು ಕಾನೂನು ಬಾಹಿರವಾಗಿ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಕೊಡಗಿನಲ್ಲಿ ಈ ರೀತಿಯ ಅವ್ಯವಹಾರಗಳು ಸಾಕಷ್ಟು ಸಂಘ, ಸಂಸ್ಥೆಗಳಲ್ಲಿ ನಡೆದಿವೆ. ಇಂತವರ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುದಯ್ಯ ಪೊಲೀಸರಿಗೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಐಲಪಂಡ ಪೂಣಚ್ಚ ಹಾಜರಿದ್ದರು.