ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವನ-ಧನ ವಿಕಾಸ ಕೇಂದ್ರ’ ಅನುಷ್ಠಾನಕ್ಕೆ ಸೂಚನೆ

ಕೊಡಗು ಜಿ‌ಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
Last Updated 10 ನವೆಂಬರ್ 2021, 12:37 IST
ಅಕ್ಷರ ಗಾತ್ರ

ಮಡಿಕೇರಿ: ವನ-ಧನ ವಿಕಾಸ ಕೇಂದ್ರಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ ಅವರು, ‘ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಬೆಲೆ ಕಲ್ಪಿಸುವಲ್ಲಿ ವನ-ಧನ ವಿಕಾಸ ಕೇಂದ್ರ ತೆರೆಯಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅವಕಾಶ ಮಾಡಿದೆ‘ ಎಂದು ತಿಳಿಸಿದರು.

‘ಕಿರು ಅರಣ್ಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವ ಕಾರ್ಯಕ್ರಮ ಅನುಷ್ಠಾನ ಸಂಬಂಧ ವನ-ಧನ ಕೇಂದ್ರಗಳನ್ನು ಸ್ಥಾಪಿಸಿ ಕಿರು ಅರಣ್ಯ ಉತ್ಪನ್ನಗಳ ಮೌಲ್ಯವರ್ಧಿತ ಮಾರುಕಟ್ಟೆ ಸೃಜಿಸುವ ಮೂಲಕ ಬುಡಕಟ್ಟು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಜಿಲ್ಲೆಯಲ್ಲಿ ವನ ಧನ ವಿಕಾಸ ಕೇಂದ್ರ ಸ್ಥಾಪಿಸಲು ಕನಿಷ್ಠ 15 ಸ್ವಸಹಾಯ ಸಂಘಗಳ 20 ಸದಸ್ಯರನ್ನು ಒಳಗೊಂಡ 300 ಸದಸ್ಯರನ್ನು ಆಯ್ಕೆ ಮಾಡಬೇಕಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಲ್ಯಾಂಪ್ಸ್ ಸಹಕಾರದೊಂದಿಗೆ ವನ- ಧನ ವಿಕಾಸ ಕೇಂದ್ರ ಸ್ಥಾಪಿಸಲು 300 ಸದಸ್ಯರನ್ನು ಗುರುತಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮೂರು ಸಂಘಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನೆ (ಎನ್‍ಆರ್‌ಎಲ್‍ಎಂ) ಯಡಿ ನಾಗರಹೊಳೆಯಲ್ಲಿ ಜೇನು ಸಾಕಾಣಿಕೆ ಮತ್ತು ಸಂರಕ್ಷಣೆ ಹಾಗೂ ಲ್ಯಾಂಟೇನಾ ಪೀಠೋಪಕರಣ ತಯಾರಿಕೆ, ಬಸವನಹಳ್ಳಿಯಲ್ಲಿ ಸೀಗೆಹುಡಿ ಸಂಗ್ರಹಣೆ ಮತ್ತು ಸಂಸ್ಕರಣೆ ಹಾಗೂ ಬಿದಿರಿನಿಂದ ಬುಟ್ಟಿ ಮತ್ತು ಕರಕುಶಲ ವಸ್ತುಗಳ ತಯಾರಿಕೆ, ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮದಲ್ಲಿ ಜೇನು ಸಂಗ್ರಹಣೆ ಹಾಗೂ ಸಂರಕ್ಷಣೆ ಜೊತೆಗೆ ಕಾಚಂಪುಳಿ ತಯಾರಿಕೆ ಘಟಕ ಆರಂಭಿಸಲು ಈ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀನಿವಾಸ ಹೇಳಿದರು.

ಬಸವನ ಹಳ್ಳಿ ವ್ಯಾಪ್ತಿಯ 27 ಸಂಘದಿಂದ 354 ಸದಸ್ಯರು, ನಾಗರಹೊಳೆ 22 ಸಂಘದಿಂದ 298 ಸದಸ್ಯರು, ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮದ 26 ಸಂಘದಿಂದ 240 ಸದಸ್ಯರಿದ್ದು, ಈ ಸಂಘಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಮಂಡಳಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಮೂರು ತಾಲ್ಲೂಕಿನ ಮೂರು ಸ್ವಸಹಾಯ ಸಂಘದ 20 ಮಂದಿಗೆ ತರಬೇತಿ ನೀಡಲಾಗುತ್ತದೆ. ಈ 20 ಮಂದಿ ಉಳಿದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ಪಡೆದು ಮಾತನಾಡಿ, ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜೊತೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಮನ್ವಯ ಅಧಿಕಾರಿ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಷಾ, ನಗರಸಭೆಯ ರೇಖಾ, ಬಿಸಿಎಂ ಇಲಾಖೆ ಅಧಿಕಾರಿ ಕವಿತಾ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕ ದೇವರಾಜು, ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT