ಶನಿವಾರಸಂತೆ: ‘ಓಣಂ’ ಹಬ್ಬದ ಅಂಗವಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಸಂತೆಯ ದಿನ ‘ದಗ್ಗಿಳ್ಳಿಕಾಯಿ’ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಹಬ್ಬದ ಸಂದರ್ಭದಲ್ಲಿ ನೆರೆಯ ಕೇರಳ ರಾಜ್ಯದಲ್ಲಿ ಈ ಕಾಯಿಗೆ ಹೆಚ್ಚಿನ ಬೇಡಿಕೆಯಿದ್ದು ವ್ಯಾಪಾರಿಗಳು ಮುಗಿಬಿದ್ದು ಖರೀದಿಸಿದರು.
ಮಳೆಯ ಕಾರಣ ಈ ವಾರ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಕಾಯಿ ಪೂರೈಕೆ ಆಗಿದ್ದರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಪ್ರತಿ 20 ಕೆ.ಜಿ ತೂಕದ ಚೀಲಕ್ಕೆ ₹ 800 ಧಾರಣೆಯಿತ್ತು. ಉತ್ತಮ ಬೆಲೆ ಬಂದಿದ್ದರಿಂದ ರೈತರು ಸಂತಸಗೊಂಡಿದ್ದರು. ಸಂತೆಯಲ್ಲಿ ವ್ಯಾಪಾರಿಗಳು ನೂರಾರು ಚೀಲ ದಗ್ಗಿಳ್ಳಿಕಾಯಿ ಖರೀದಿಸಿದ ದೃಶ್ಯ ಕಂಡು ಬಂದಿತು.
1 ಕೆ.ಜಿ ಕಾಯಿಗೆ ₹ 40 ದರವಿತ್ತು. ಒಂದು ಕೆ.ಜಿಗೆ 1ರಿಂದ 2 ಕಾಯಿ ಮಾತ್ರ ತೂಗುತ್ತವೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಜಾನೆಯೇ ಮಾರುಕಟ್ಟೆಗೆ ಕಾಯಿ ತಂದಿದ್ದರು. ತೋಟ, ಮನೆಯ ಹಿತ್ತಲಿನಲ್ಲಿ ಬೆಳೆಯುವ ದಗ್ಗಿಳ್ಳಿಕಾಯಿಗೆ ಮಡಿಕೇರಿ ವ್ಯಾಪ್ತಿಯಲ್ಲಿ ‘ಬಂಡುಳ್ಳಿ’ ಎಂದು ಕರೆದರೆ ಕೇರಳದಲ್ಲಿ ‘ಕರ್ ನಾರಂಗ’ , ‘ಬಡುವಪುಳಿ’ ಎಂಬ ಹೆಸರಿದೆ.
‘ಉಳಿದ ದಿನಗಳಲ್ಲಿ ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಇಲ್ಲಿ ಖರೀದಿಸುವ ದಗ್ಗಿಳ್ಳಿಕಾಯಿ ಕೇರಳ, ತಲಪಾಡಿ, ಕೊಟ್ಟಾಯಂ, ಅಲ್ವೆ, ಮಾನಂದವಾಡಿ, ಬಡುಕೆರೆ, ಕೊಯಮತ್ತೂರು ಸೇರಿದಂತೆ ಇತರೆಡೆಗೆ ರವಾನೆಯಾಗುತ್ತದೆ’ ಎಂದು ವ್ಯಾಪಾರಿ ಮಹಮ್ಮದ್ ಖಾನ್ ತಿಳಿಸಿದರು.