ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪದಿಂದ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಇಲ್ಲಿನ ಚೆಂಬು ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಇಲ್ಲಿ ಸಣ್ಣ ಪ್ರಮಾಣದ ಭೂಕಂಪನ ಆಗುತ್ತಿದೆ ಅಷ್ಟೇ. ಇದುವರೆಗೂ ಬಿರುಕು ಕೂಡ ಮೂಡಿಲ್ಲ ಎಂದರು.
ಸರ್ಕಾರ ಭೂಕಂಪನವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಭೂಮಿಯಲ್ಲಿ ಬಿರುಕು ಮೂಡಿದರಷ್ಟೆ ಅನಾಹುತ ಅಂತ ತಿಳಿದುಬಂದಿದೆ. ಹೈದರಾಬಾದಿನಿಂದ ಭೂಗರ್ಭ ಶಾಸ್ತ್ರಜ್ಞರು ಕೂಡ ಬಂದಿದ್ದಾರೆ. ನಾಳೆ ವಿಜ್ಞಾನಿಗಳು ನಮಗೆ ವರದಿ ನೀಡುತ್ತಾರೆ. ಕೊಡಗಿನ ಜನ ಆತಂಕಪಡುವ ಅಗತ್ಯವಿಲ್ಲ ಎಂದರು.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. ಯಾರೇ ಇದ್ದರೂ ತನಿಖೆ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್ ಸರ್ಕಾರ ಆಗಿದ್ದರೆ ಪ್ರಕರಣ ಮುಚ್ಚಿ ಹಾಕುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರೆಂಬುವವರು ಇದ್ದರು. ಅವರನ್ನೂ ನಾವು ಬಂಧಿಸಿದ್ದೇವೆ ಎಂದರು.
ಮಳೆ ಹಾನಿ ಪರಿಹಾರ ಏರಿಕೆ ಸಂಪೂರ್ಣ ಮನೆ ಹಾನಿಯಾದವರಿಗೆ ₹ 5 ಲಕ್ಷ, ಭಾಗಶಃ ಹಾನಿಯಾದವರಿಗೆ ₹ 50 ಸಾವಿರ, ನೀರು ನುಗ್ಗಿದ ಮನೆಗಳಿಗೆ ₹ 10 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.