ಧಾರವಾಡ: ಕಾರಾಗೃಹದ ಕೈದಿಗಳು ಬೆಳೆದ ತರಕಾರಿಗಳು ಹಾಗೂ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಧಾರವಾಡದ ಪೊಲೀಸ್ ಹೆಡ್ಕ್ವಾಟ್ರರ್ಸ್ನಲ್ಲಿ ಶುಕ್ರವಾರ ಮಾರಾಟ ಮಳಿಗೆ ಆರಂಭಿಸಲಾಯಿತು.
ಮಳಿಗೆ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾತನಾಡಿ, ಕೈದಿಗಳ ನಡೆ, ನುಡಿ, ಮನಸ್ಸು ಪರಿವರ್ತನೆಗಾಗಿ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ’ ಎಂದರು.
ಜಿಲ್ಲಾ ಕಾರಾಗೃಹದ 10 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಟೊಮೆಟೊ, ಹಿರೇಕಾಯಿ, ಕೋಸು, ಮೂಲಂಗಿ ಇತರೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆ ಪ್ರದೇಶಕ್ಕೆ ಹೋಲಿಸಿದರೆ ಇಲ್ಲಿ ರಿಯಾಯ್ತಿ ದರದಲ್ಲಿ ತರಕಾರಿಗಳು ಸಿಗುತ್ತವೆ’ ಎಂದರು.
ಕಾರಾಗೃಹ ಸೂಪರಿಂಟೆಂಡೆಂಟ್ ಡಾ.ಆರ್. ಅನಿತಾ ಮಾತನಾಡಿ, ‘ಕೈದಿಗಳನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಬಂಧಿಗಳ ಜತೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು’ ಎಂದು ಹೇಳಿದರು. ಗ್ರಾಮೀಣ ವಿಭಾಗದ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ, ಡಿವೈಎಸ್ಪಿ ಶ್ರವಣ ಗಾಂವಕರ ಉಪಸ್ಥಿತರಿದ್ದರು.