ಶನಿವಾರಸಂತೆ: ಲಾಕ್ಡೌನ್ ನಿಟ್ಟಿನಲ್ಲಿ ಸೂಕ್ತ ಮಾರುಕಟ್ಟೆ ಲಭ್ಯವಾಗದ ಕಾರಣ ಕೊಡ್ಲಿಪೇಟೆಯ ನಿವೃತ್ತ ಯೋಧ ದೇವರಾಜು ತಾವು ಬೆಳೆದಿದ್ದ ಮೆಣಸಿನಕಾಯಿಯನ್ನು ತಂದು ಇಲ್ಲಿನ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕರಿಗೆ ಹಂಚಿದರು.
ಅವರು ಒಂದು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದು ಮಾರುಕಟ್ಟೆ ಲಭ್ಯವಾಗದ ಕಾರಣ ಕೊಳೆತುಹೋಗುವ ಹಂತಕ್ಕೆ ತಲುಪಿವೆ. ಇದರಿಂದ ನಿರಾಸೆಗೊಂಡ ಅವರು 15 ಚೀಲ ಮೆಣಸಿನಕಾಯಿಯನ್ನು ಕೊಯ್ದು ಟ್ರಾಕ್ಟರ್ನಲ್ಲಿ ತಂದು ಬಸ್ನಿಲ್ದಾಣದ ಬಳಿ ಟಾರ್ಪಲ್ ಹಾಸಿ ಅದರ ಮೇಲೆ ಸುರಿದು ಸಾರ್ವಜನಿಕರಿಗೆ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದರು. ಜನ ಮಗಿಬಿದ್ದು ತೆಗೆದುಕೊಂಡು ಹೋದರು. ಒಂದು ಮೆಣಸಿನಕಾಯಿಯೂ ಉಳಿಯದೇ ಅರ್ಧ ಗಂಟೆಯಲ್ಲೇ ಖಾಲಿಯಾಗಿ ಹೋಯಿತು.
‘ಕೊರೊನಾ ವೈರಸ್ ರೈತರ ಬದುಕಿನಲ್ಲೂ ಆಟವಾಡುತ್ತಿದೆ. ಕಷ್ಟಪಟ್ಟು ಬೆಳೆದಿದ್ದೆ. ಗೊಬ್ಬರ, ಕಾರ್ಮಿಕರ ಕೆಲಸ, ಕೊಯ್ಲು ಎಲ್ಲಾ ಸೇರಿ ತುಂಬಾ ನಷ್ಟವಾಗಿದೆ. ಅಸಲೂ ಸಿಗುವುದಿಲ್ಲ ಎಂದಾದಾಗ ಜನರಿಗಾದರೂ ಉಪಯೋಗವಾಗಲಿ ಎಂದು ತಂದು ಸುರಿದೆ‘ ಎಂದು ದೇವರಾಜ್ ಬೇಸರ ವ್ಯಕ್ತಪಡಿಸಿದರು.