ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮಕ್ಕೆ ಕಂದಾಯ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಪೇರೂರು ಬೆಟ್ಟದ ಸಾಲಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ಶಬ್ದ ಕೇಳಿಬರುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ಭೇಟಿಯಾದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು. ಬೆಟ್ಟದಲ್ಲಿ ನೀರು ಹರಿಯುವಂತಹ ಶಬ್ದ ಕೇಳಿಸುತ್ತಿದ್ದು, ಸೋಮವಾರ ರಾತ್ರಿಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದರು.
ಮಂಗಳವಾರ ಆ ಶಬ್ದ ಮತ್ತಷ್ಟು ಜೋರಾಗಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
‘ಸ್ಥಳ ಪರಿಶೀಲನೆ ನಡೆಸಿದ್ದು, ಬೆಟ್ಟದ ಸಾಲಿನಲ್ಲಿ ನೀರು ಹರಿಯುವಂತಹ ಯಾವುದೇ ಶಬ್ದ ಕೇಳಿಬಂದಿಲ್ಲ. ಆದರೂ, ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಅವರು ನೀಡುವ ಸೂಚನೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಕಂದಾಯ ಪರಿವೀಕ್ಷಕ ರಾಮಯ್ಯ ತಿಳಿಸಿದರು.
ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಜಿಲ್ಲಾ ಅಧಿಕಾರಿ ರೇಷ್ಮಾ, ಗ್ರಾಮಲೆಕ್ಕಿಗರಾದ ದಾನೇಶ್ವರಿ, ಜನಾರ್ದನ, ಪಿಡಿಒ ಶ್ರೀಧರ್ ಇದ್ದರು.