ಸೋಮವಾರಪೇಟೆ: ರೋಟರಿ ಸಂಸ್ಥೆ ಪ್ರಪಂಚದಲ್ಲಿ ಸೇವೆಯಲ್ಲಿ ಮಂಚೂಣಿಯಲ್ಲಿದ್ದು, ಎಲ್ಲ ಜಾತಿ, ಮತ, ಸಮುದಾಯದವರಿಗೂ ಯಾವುದೇ ತಾರತಮ್ಯ ಮಾಡದೆ, ಸದಸ್ಯತ್ವ ನೀಡುತ್ತ ಸೇವೆಯಲ್ಲಿ 118 ವರ್ಷಗಳನ್ನು ಸವೆಸಿದೆ. ಯೋಜನೆಗಳ ಅನುಷ್ಠಾನಕ್ಕೆ ಕರ್ತವ್ಯನಿಷ್ಠೆ, ಕ್ಷಮತೆಯಿಂದ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ಪಿಡಿಜಿ ಎಂ. ಲಕ್ಷ್ಮೀನಾರಾಯಣ್ ಹೇಳಿದರು.
ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ಮಂಗಳವಾರ ನಡೆದ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ನೂತನ ಸಾಲಿನ ಪದಾಧಿಕಾರಿಗಲ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಕಾರ್ಯ ನೆರವೇರಿಸಿ ಮಾತನಾಡಿದರು. ಸಮಾಜ ಸೇವೆಯ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ. ಎಲ್ಲ ಸದಸ್ಯರು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡುವುದರಿಂದ ಅಂದುಕೊಂಡ ಯೋಜನೆಗಳು ಸಫಲವಾಗಲು ಸಾಧ್ಯವಾಗುತ್ತಿದೆ ಎಂದರು.
ರೋಟರಿ ಸದಸ್ಯತ್ವದಿಂದ ಸಂಬಂಧಗಳ ಬೆಸುಗೆ ಬೆಳೆಯುತ್ತದೆ. ಸಂಸ್ಥೆಯ ಸಿದ್ದಾಂತಗಳನ್ನು ಅರಿತುಕೊಂಡು ಮುನ್ನಡೆದರೆ ಯೋಜನೆ ಯಶಸ್ವಿಯಾಗಲು ಸಾಧ್ಯ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆಗಳನ್ನು ಮಾಡಿಕೊಂಡು ಅವರ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯ ಸದಸ್ಯರು ಶ್ರಮಿಸಬೇಕು ಎಂದರು.
ನೂತನ ಸಾಲಿನ ಅಧ್ಯಕ್ಷ ನಂಗಾರು ವಸಂತ್ ಮಾತನಾಡಿ, ಸಂಸ್ಥೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ 2023-24ರ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಚೇತನ್ ಚಂದ್ರಾಜು, ಕಳೆದ ಸಾಲಿನ ಸಹಾಯಕ ಗವರ್ನರ್ ಎಸ್.ಕೆ. ಸತೀಶ್, ಅಧ್ಯಕ್ಷ ಎಚ್.ಸಿ. ಲೋಕೇಶ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.