ನಾಪೋಕ್ಲು: ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸಾನ್ನಿಧ್ಯದಲ್ಲಿ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ರುದ್ರಹೋಮ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ರುದ್ರ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ, ರುದ್ರ ಹೋಮ ನೆರವೇರಿತು.
ಉಡುಪಿಯ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ತಲಕಾವೇರಿ ಕ್ಷೇತ್ರದ ಮಹಿಮೆ ಕುರಿತು ಭಕ್ತರಿಗೆ ವಿವರಿಸಿದರು. ಬಳಿಕ,ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯದ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಸಂಪತ್ ಕುಮಾರ್ ಹಾಗೂ ತಕ್ಕಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಕೋಡಿ ಮಾದಪ್ಪ ಅವರನ್ನು ಭಗಂಡೇಶ್ವರ ತಲಕಾವೇರಿ ವ್ಯವಸ್ಥಾಪನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ತೇಗಾರ ಕೊಂಡೀರ ಪೊನ್ನಣ್ಣ, ಪ್ರಮುಖರಾದ ಮಣವಟ್ಟೀರ ದೊರೆ ಸೋಮಣ್ಣ, ಪಿ.ಡಿ.ಪೊನ್ನಪ್ಪ, ತಮ್ಮುಪೂವಯ್ಯ, ಮಂದಪಂಡ ಸತೀಶ್ ಪಾಲ್ಗೊಂಡಿದ್ದರು.