ಕುಶಾಲನಗರ: ಉತ್ತರ ಕೊಡಗಿನ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಹಾಡಹಗಲೇ ಮೀಸಲು ಅರಣ್ಯ ಅಕ್ರಮವಾಗಿ ಪ್ರವೇಶ ಮಾಡಿ ಕಡವೆಯನ್ನು ಬೇಟೆಯಾಡಿದ ಈ ಮೂವರು ಆರೋಪಿಗಳು ಕಡವೆ ಮಾಂಸವನ್ನು ಪ್ಯಾಕ್ ಮಾಡಿ ಸಾಗಿಸುತ್ತಿದ್ದ ವೇಳೆ ಮೀನುಕೊಲ್ಲಿ ವಲಯದ ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹತ್ತು ಕೆ.ಜಿ ಕಡವೆ ಮಾಂಸ ಸಮೇತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯಾಧಿಕಾರಿ ನೆಹರು ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಅರಣ್ಯ ಪ್ರದೇಶಕ್ಕೆ ಕಾನೂನು ಬಾಹಿರವಾಗಿ ನುಗ್ಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರನ್ನು ಬಂಧಿಸಿ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರವಾಸಿ ತಾಣ ದುಬಾರೆ ಅರಣ್ಯ ಪ್ರದೇಶ,ಮೀನುಕೊಲ್ಲಿ, ನಂಜರಾಯಪಟ್ಟಣ, ಹೊಸಪಟ್ಟಣ, ರಂಗಸಮುದ್ರ, ಚಿಕ್ಲಿಹೊಳೆ, ಆನೆಕಾಡು ಪ್ರದೇಶಗಳಲ್ಲಿಮರಗಳ್ಳರು ಹಾಗೂ ವನ್ಯಜೀವಿ ಬೇಟೆಗಾರರು ಅರಣ್ಯ ನುಸುಳದಂತೆ ಅರಣ್ಯ ಸಿಬ್ಬಂದಿಗಳು ತೀವ್ರ ನಿಗಾವಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿ ಚರಣ್ ಕುಮಾರ್, ಕಿರಣ್, ಆಲ್ಬರ್ಟ್ ಡಿಸೋಜಾ , ರವಿ ಉತ್ನಾಲ್, ಅಪ್ಪಸ್ವಾಮಿ, ಚಾಲಕ ವಾಸು ಪಾಲ್ಗೊಂಡಿದ್ದರು.