ಮಡಿಕೇರಿ: ಸಂಪಾಜೆ ಅರಣ್ಯ ತನಿಖಾ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಅಕ್ರಮವಾಗಿ ಹಲಸು ಮತ್ತು ಹೆಬ್ಬಲಸು ಮರ ಸಾಗಾಟ ಮಾಡಲಾಗುತ್ತಿತ್ತು. ನಾಪೋಕ್ಲು ಗ್ರಾಮದ ಹನೀಫ್ (35), ಪಾಲಿಬೆಟ್ಟದ ಪಿ.ಕೆ.ಮಜೀದ್ (45), ವಿರಾಜಪೇಟೆ ತಾಲ್ಲೂಕಿನ ಕಲ್ಲುಬಾಣೆಯ ನಿವಾಸಿ ಕೆ.ಕೆ.ಮಜೀದ್ (43) ಬಂಧಿತರು. ಅಂದಾಜು ₹ 2.50 ಲಕ್ಷ ಮೌಲ್ಯದ ಮರ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ವಾಹನ ಹಾಗೂ ಮರ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ, ಸಂಪಾಜೆ ವಲಯದ ವಲಯ ಅರಣ್ಯಾಧಿಕಾರಿ ಎಂ.ಕೆ. ಮಧುಸೂಧನ್, ಉಪ ವಲಯ ಅರಣ್ಯಾಧಿಕಾರಿಗಳಾದ ವಿನಯಕೃಷ್ಣ, ರಾಘವ್, ವಿಜೇಂದ್ರ ಕುಮಾರ್ ಎಂ. ಮತ್ತಿತರರು ಪಾಲ್ಗೊಂಡಿದ್ದರು.