ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ತುಡಿತ, ನೆಮ್ಮದಿಯ ಆಡಳಿತದ ಆಶಯ

ಗಂಗಾವತಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ಮಾತು
Last Updated 5 ಮೇ 2018, 13:12 IST
ಅಕ್ಷರ ಗಾತ್ರ

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಇಕ್ಬಾಲ್ ಅನ್ಸಾರಿ, ಎದುರಾಳಿ ಬಿಜೆಪಿ ಅಭ್ಯರ್ಥಿ ಎದುರು ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ ಯತ್ನಿಸುತ್ತಿದ್ದಾರೆ. ಬಿಡುವಿಲ್ಲದ ಪ್ರಚಾರದ ಮಧ್ಯೆಯೂ ಅವರು ’ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಅಧಿಕಾರದಲ್ಲಿರುವವರ, ಗೆದ್ದವರ ಹಿಂದೆ ಹೋಗುತ್ತೀರಿ ಎಂಬ ಟೀಕೆ ಇದೆಯಲ್ಲ?

ಗೆದ್ದವರ ಜತೆ ಹೋಗಿಲ್ಲ. ಜೆಡಿಎಸ್‌ನಿಂದ ಗೆದ್ದಿದ್ದೇನೆ ನಿಜ. ಆದರೆ, ಜೆಡಿಎಸ್‌ಗೆ ಶಕ್ತಿಯಿಲ್ಲ. ಜನ ನನ್ನೊಂದಿಗಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ. ಮೊದಲ ಬಾರಿಗೆ ಜೆಡಿಎಸ್ ನನಗೆ ಸಚಿವ ಸ್ಥಾನ ನೀಡಿದಾಗ ಪಕ್ಷಕ್ಕೆ ಹೆಸರು ತಂದಿದ್ದೇನೆ. ಕ್ಷೇತ್ರದ ಜತೆಜತೆಗೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ.

ಸಚಿವರಾಗಿದ್ದಾಗಿನ ಅನ್ಸಾರಿಗೂ ಈಗಿನ ಶಾಸಕ ಅನ್ಸಾರಿಗೂ ಅವರ ಕಾರ್ಯ ಶೈಲಿ, ನಡುವಳಿಕೆಯಲ್ಲಿ ಭಾರಿ ವ್ಯತ್ಯಾಸವಿದೆಯಲ್ಲ?

ಸಚಿವನಾಗಿದ್ದಾಗ ಅಧಿಕಾರವಿತ್ತು. ಸಹಜವಾಗಿ ಅಭಿವೃದ್ಧಿಯ ತುಡಿತವಿತ್ತು. ಶಾಸಕನಾದಾಗ ಕೆಲಸ ಕಡಿಮೆಯಾಗಿದೆ. ಜನರಿಗೆ ಯಾವುದು ಅಗತ್ಯವಿತ್ತೋ ಅದೆಲ್ಲವನ್ನು ಆದ್ಯತೆಯ ಮೇರೆಗೆ ಮಾಡಿದ್ದೇನೆ. ಆದರೆ ನನ್ನ ಕಾರ್ಯಶೈಲಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಗಂಗಾವತಿ ಕ್ಷೇತ್ರದಲ್ಲಿ ಈಚೆಗೆ ನಡೆದ ವಿದ್ಯಮಾನಗಳು, ಕೋಮು ಸಂಘರ್ಷ, ಬೇರೆ ಪಕ್ಷದ ನಾಯಕರ ಮೇಲೆ ವೈಯಕ್ತಿಕ ನಿಂದನೆ, ನಿಮ್ಮ ವಿರುದ್ಧ ಗಂಗಾವತಿಯಲ್ಲಿ ನಡೆದ ಬಂದ್, ಕೌಟುಂಬಿಕ ವಿರಸ ಇವೆಲ್ಲವೂ ನಿಮ್ಮ ರಾಜಕೀಯ ಬದುಕಿನ ಮೇಲೆ ಪರಿಣಾಮ ಬೀರುವುದಿಲ್ಲವೇ?

ಈ ಯಾವ ಅಂಶಗಳೂ ನನ್ನ ರಾಜಕೀಯ ಅಥವಾ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುವುದಿಲ್ಲ. ಅನ್ಸಾರಿ ಏನೆಂಬುವುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ. ಕೋಮುಗಲಭೆ, ಶಾಂತಿ ಕದಡುವವರು ಬಿಜೆಪಿ, ಸಂಘ ಪರಿವಾರದವರು. ಅವರಲ್ಲಿ ಅಭಿವೃದ್ಧಿಯ ಅಜೆಂಡಾ ಇಲ್ಲ. ಅನ್ಸಾರಿಯನ್ನು ಅಭಿವೃದ್ಧಿ ವಿಷಯದಲ್ಲಿ ಸೋಲಿಸಲಾಗದು ಎಂಬ ಕಾರಣಕ್ಕೆ ಸಲ್ಲದ ವಿಚಾರ ಜನರಲ್ಲಿ ಹರಡಿ ಗಲಭೆ ಸೃಷ್ಟಿಸುತ್ತಾರೆ. ಇಂತಹವರು ಅಧಿಕಾರಕ್ಕೆ ಬಂದರೆ ಕ್ಷೇತ್ರದ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಕೋಮುಗಲಭೆ ನಾನು ಎಬ್ಬಿಸಿರುವ ಬಗ್ಗೆ ಒಂದೇ ಒಂದು ಉದಾಹರಣೆ ಸಾಕ್ಷಿ ಸಮೇತ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ.

ಅನ್ಸಾರಿ ಸ್ಪರ್ಧೆಯೋ ಅಥವಾ ಕಾಂಗ್ರೆಸ್ ಸ್ಪರ್ಧೆಯೋ? ಯಾವುದು ಸರಿ.

ಇಲ್ಲಿ ಮೊದಲು ಜೆಡಿಎಸ್ ಇರಲಿಲ್ಲ. ಪಕ್ಷಗಳು ಜಾತಿ ರಾಜಕಾರಣಕ್ಕೆ ನಿಂತಿವೆ. ಜಾತಿಯೇ ಎಲ್ಲ ಪಕ್ಷಗಳ ಆಧಾರ. ಈ ಹಿನ್ನೆಲೆಯಲ್ಲಿ ಜನ ಪಕ್ಷಗಳನ್ನು ನೋಡುತ್ತಿಲ್ಲ. ವ್ಯಕ್ತಿಯ ಹಿನ್ನೆಲೆ ಮೇಲೆ ಬೆಂಬಲ ನೀಡುತ್ತಾರೆ. ಕಾಂಗ್ರೆಸ್ಸಿನಲ್ಲಿ ಸಿಎಂ, ಪರಮೇಶ್ವರ, ಖರ್ಗೆ ಅವರ ಜನಾಂಗದ ಜತೆಗೆ ನನ್ನ ಸಮುದಾಯದವರೂ ಇದ್ದಾರೆ. ಅವೆಲ್ಲವೂ ಸೇರಿದರೆ ಕಾಂಗ್ರೆಸ್. ಇದು ಖಚಿತವಾಗಿ ಕಾಂಗ್ರೆಸ್ ಸ್ಫರ್ಧೆ.

ಹಣ, ಜಾತಿ, ಮದ್ಯದ ಲಾಬಿಯ ಬಗ್ಗೆ ನಿಮ್ಮ ವಿರುದ್ಧ ಸಾಕಷ್ಟು ಆರೋಪ ಕೇಳಿ ಬರುತ್ತಿವೆ?

ನಾನು ಹಣ, ಮದ್ಯ ಹಂಚಲ್ಲ.  ಇವತ್ತಿಗೂ ಒಂದೇ ಒಂದು ಬಾಟಲಿ ಯಾರಿಗೂ ಕೊಟ್ಟಿಲ್ಲ. ಕಳೆದ 40 ವರ್ಷದ ವ್ಯವಹಾರ ಅದು. ಜನರಿಗೆ ಓಪನ್ ಆಗಿ ಹೇಳುತ್ತೇನೆ  ಹಣ ತೆಗೆದುಕೊಂಡರೆ, ಒಂದೋ ಎರಡು ಪ್ಲೇಟ್ ಚಿಕನ್ ತಿನ್ನಬಹುದು ಅಷ್ಟೆ. ಅದರ ಬದಲಿಗೆ ನಿಮ್ಮ ಓಣಿಗೆ ಬೇಕಾದ ಕೋಟಿಗಟ್ಟಲೆ ಹಣ ಅನುದಾನದ ರೂಪದಲ್ಲಿ ಪಡೆಯಿರಿ ಎಂದರು

ಅನ್ಸಾರಿ ಈ ಬಾರಿ ಏಕೆ ಗೆಲ್ಲಬೇಕು, ಗೆದ್ದರೆ ಏನು ಮಾಡುತ್ತೀರಿ?

ಕ್ಷೇತ್ರದ ಎಲ್ಲ ಜಾತಿ ಜನಾಂಗದವರು ಶಾಂತಿ, ನೆಮ್ಮದಿಯಿಂದ ಬದುಕಲು, ಬಡವರಿಗೆ ಉತ್ತಮ ಅವಕಾಶ, ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಸೇವೆ ಮಾಡಿದ್ದೇನೆ.

-ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT