ಶನಿವಾರಸಂತೆ: ಸಮೀಪದ ಗಡಿ ಭಾಗವಾದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ನೀರುಗಂಟಿ, ನವಗ್ರಾಮದ ನಿವಾಸಿ ಮಣಿಮುತ್ತು (34) ಶಿವಪುರದ ಪಂಪ್ಹೌಸ್ ಬಳಿ ಸೋಮವಾರ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ, ಗರಗಂದೂರು ಹಾಗೂ ಸ್ಥಳೀಯ ಮುಳುಗುತಜ್ಞರಾದ ಲತೀಫ್, ತಾಯಿರ್ ಹಾಗೂ ಇಬ್ರಾಯಿಂ ಅವರು ಶವಕ್ಕಾಗಿ ಸೋಮವಾರ ಸಂಜೆವರೆಗೂ ಶೋಧ ಕಾರ್ಯ ನಡೆಸಿದರು. ಆದರೆ, ಶವ ಪತ್ತೆಯಾಗಲಿಲ್ಲ.
‘ನದಿ 45 ಅಡಿ ಆಳವಿದ್ದು, ಸಂಪೂರ್ಣ ಶೋಧಿಸಲಾಗಿದೆ. ಸಂಜೆ 7.15 ರವರೆಗೂ ಮೃತದೇಹ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮತ್ತೆ ಮಂಗಳವಾರ ಶೋಧ ಕಾರ್ಯ ಮುಂದುವರೆ ಸುತ್ತೇವೆ’ ಎಂದು ಅಗ್ನಿಶಾಮಕ ದಳದ ಪ್ರಭಾರ ಅಧಿಕಾರಿ ನಾಗೇಶ್ ತಿಳಿಸಿದರು.
‘ಗಂಡ, ಹೆಂಡತಿ ಇಬ್ಬರು ನದಿ ಬಳಿ ಬಂದಿದ್ದಾರೆ. ಇಬ್ಬರ ನಡುವೆ ಜಗಳ ನಡೆದಿರಬಹುದು. ಸರಸ್ವತಿಯ ತಾಯಿ ಬೆಳಿಗ್ಗೆ ನನಗೆ ಕರೆ ಮಾಡಿದ್ದರಿಂದ ನದಿ ತೀರಕ್ಕೆ ಬಂದೆ. ಅಲ್ಲಿದ್ದ ಕೆಲ ಸ್ಥಳೀಯರು ಹಾಗೂ ಪತ್ನಿ ಸರಸ್ವತಿ ಅವರು ಮಣಿಮುತ್ತು ನದಿಗೆ ಹಾರಿರುವುದಾಗಿ ತಿಳಿಸಿದರು. ತೀರದಲ್ಲಿ ಆತನ ಉಡುಪು ಸಹ ಬಿದ್ದಿತ್ತು. ಈ ವಿಷಯವನ್ನು ಪೊಲೀಸರಿಗೆ, ಪಿಡಿಒ ಹಾಗೂ ಪಂಚಾಯಿತಿ ಸದಸ್ಯರಿಗೆ ತಿಳಿಸಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಮಾಹಿತಿ ನೀಡಿದರು.
ಮಣಿಮುತ್ತು ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಎಎಸ್ಐ ಚೆನ್ನಯ್ಯ, ಹೆಡ್ ಕಾನ್ಸ್ಟೆಬಲ್ ಡಿಂಪಲ್, ಸಿಬ್ಬಂದಿ ಪರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಸದಸ್ಯರು, ಸಿಬ್ಬಂದಿ, ಪಿಡಿಒ ಹರೀಶ್, ಮೃತನ ಸಂಬಂಧಿಕರು ಸ್ಥಳದಲ್ಲಿದ್ದರು.