ಕುಶಾಲನಗರ: ಕೊಡವ ಪಂಚಾಂಗದ ಹೊಸ ವರ್ಷ ‘ಎಡಮ್ಯಾರ್’ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ವತಿಯಿಂದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಭಾನುವಾರ ಗದ್ದೆಯಲ್ಲಿ ಉಳುಮೆ ಮಾಡುವುದರೊಂದಿಗೆ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಭಾನುವಾರ ಬೆಳಿಗ್ಗೆ ಸಿ.ಎನ್.ಸಿ. ಮುಖ್ಯಸ್ಥ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಂಪ್ರಾದಾಯಿಕ ಉಡುಗೆ ಧರಿಸಿ ಉಳುಮೆ ಮಾಡುವುದರೊಂದಿಗೆ ಸಾಂಪ್ರದಾಯಿಕವಾಗಿ ನೂತನ ವರ್ಷಾಚರಣೆಯನ್ನು ಬರಮಾಡಿಕೊಂಡರು.
ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸ ವರ್ಷ ಆಚರಿಸಲಾಗುತ್ತದೆ. ಜಿಲ್ಲೆಯ ಜನತೆಗೆ ಕೃಷಿ ಪ್ರಧಾನ ಜೀವಾಳವಾಗಿರುವುದರಿಂದ ಹೊನ್ನಾರು ಆಚರಿಸುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ.
ಈ ಸಂದರ್ಭ ಮಾತನಾಡಿದ ನಾಚಪ್ಪ ಅವರು, ಎಲ್ಲ ಮೂಲಭೂತ ಹಕ್ಕುಗಳನ್ನು ಸಂವಿಧಾನ ಬದ್ಧಗೊಳಿಸಲು ಸರ್ಕಾರ 'ಕೊಡವ ಲ್ಯಾಂಡ್' ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಡಗು ಸಾಂಸ್ಕೃತಿಕವಾಗಿಯೂ, ಭೌಗೋಳಿಕವಾಗಿಯೂ ಶ್ರೀಮಂತವಾಗಿದೆ. ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡುವ ಮೂಲಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಇಂದಿನ ಪೀಳಿಗೆಗೆ ಅಮೂಲ್ಯ ಸಂಸ್ಕೃತಿಯನ್ನು ಬಳುವಳಿಯಾಗಿ ನೀಡುವುದು ಮತ್ತು ಮಾನವರ ನಡುವಿನ ಬಾಂಧವ್ಯಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕೊಡವರು ಸಾಮೂಹಿಕವಾಗಿ ಹಬ್ಬಹರಿದಿನಗಳನ್ನು ಆಚರಣೆ ಮಾಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಳುಮೆಗೆ ಮುನ್ನ ಮನೆಯ ನೆಲ್ಲಕ್ಕಿ ಬಾಡೆಯಲ್ಲಿ ಪೂಜೆ ಸಲ್ಲಿಸಿ ನಂತರ ಗದ್ದೆ ಹಾಗೂ ಎತ್ತುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಸಿ.ಎನ್.ಸಿ. ಸಂಘಟನೆಯ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ನಂದಿನೆರವಂಡ ಬೋಪಣ್ಣ, ಪಾರ್ವತಿ ನಾಚಪ್ಪ ಮತ್ತು ಕುಟುಂಬಸ್ಥರು ಇದ್ದರು.