ಮುಳಬಾಗಿಲು: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವೂ ಈ ಸಾಲಿನಲ್ಲಿ ₹ 10 ಲಕ್ಷ ಲಾಭಗಳಿಸಿದ್ದು ಆರ್ಥಿಕವಾಗಿ ಸದೃಢವಾಗಿದೆ ಎಂದು ಸಂಘದ ಅಧ್ಯಕ್ಷ ಆಲಂಗೂರು ಶಿವಣ್ಣ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಕಚೇರಿಯಲ್ಲಿ 2019-20ನೇ ಸಾಲಿನಲ್ಲಿ ನಡೆಯಲಿರುವ ಸರ್ವಸದಸ್ಯರ ಸಭೆಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ಮೂವತೈದು ವರ್ಷಗಳಿಂದ ನಗರಸಭೆಗೆ ಪಾವತಿಸಲಾಗದೆ ಬಾಕಿ ಇದ್ದ ಸುಮಾರು ₹ 30 ಲಕ್ಷ ತೆರಿಗೆ ಪಾವತಿಸಲಾಗಿದೆ. ಅಕ್ರಮಕ್ಕೆ ಗುರಿಯಾಗಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಜಮೀನಿಗೆ ಹದ್ದುಬಸ್ತು ಮಾಡಿ ಕಾಂಪೌಂಡ್ ಹಾಕಲಾಗಿದೆ ಎಂದರು.
ಸಂಘದಲ್ಲಿ 1,470 ಸದಸ್ಯರಿದ್ದಾರೆ. ಸರ್ವಸದಸ್ಯರ ಸಭೆಯನ್ನು ಸಂಘದ ರೈತ ಸಮುದಾಯ ಭವನದಲ್ಲಿ ಡಿ. 6ಕ್ಕೆ ನಿಗದಿಪಡಿಸಲಾಗಿದೆ. ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಆಹ್ವಾನಿಸಲಾಗಿದೆ ಎಂದರು.
ರೈತರಿಗೆ ಹಾಗೂ ಸದಸ್ಯರಿಗೆ ಅನುಕೂಲವಾಗುವಂತಹ ಎಲ್ಲಾ ತರಹದ ರಸಗೊಬ್ಬರ, ಪಶು ಆಹಾರ, ಗಾಣದ ಹಿಂಡಿ, ಬೂಸಾ, ಹೊಂಗೆ ಹಿಂಡಿ, ಬೇವಿನ ಹಿಂಡಿ ಹಾಗೂ ಹನಿ ನೀರಾವರಿ ಸಲಕರಣೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಎಂ.ಎಸ್. ಗೋವಿಂದರಾಮ್, ನಿರ್ದೇಶಕ ಕೆ.ಎನ್. ಕೃಷ್ಣಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎ. ರಾಮಕೃಷ್ಣ ಭಾಗವಹಿಸಿದ್ದರು.