ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಹಬ್ಬಕ್ಕೆ ಸಾಹಿತ್ಯಾಸಕ್ತರ ದಂಡು

Last Updated 27 ಜನವರಿ 2021, 15:41 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಬುಧವಾರ ಆರಂಭವಾದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರ ದಂಡೇ ಹರಿದುಬಂದಿತು. ಜಿಲ್ಲೆಯ ಸಾಹಿತಿಗಳು, ಚಿಂತಕರು, ಶಿಕ್ಷಕರು ನುಡಿ ಹಬ್ಬಕ್ಕೆ ಮೆರುಗು ತುಂಬಿದರು.

ಟಿ.ಚನ್ನಯ್ಯ ರಂಗಮಂದಿರ ಆವರಣದಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರಾಷ್ಟ್ರ ಧ್ವಜಾರೋಹಣ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನಾಡಧ್ವಜ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್, ಗಾಂಧೀಜಿ ಹಾಗೂ ಸರ್ವಜ್ಞರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಅವರನ್ನು ರಂಗಮಂದಿರದ ಚಿಕ್ಕಹನುಮಪ್ಪ ವೇದಿಕೆಗೆ ಕರೆತರಲಾಯಿತು. ರಂಗಮಂದಿರವು ಸಾಹಿತ್ಯಾಸಕ್ತರಿಂದ ತುಂಬಿ ಹೋಗಿತ್ತು. ರಂಗಮಂದಿರದ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳಲು ಮಳಿಗೆಗಳಿಗೆ ಮುಗಿಬಿದ್ದರು.

ಸಮ್ಮೇಳನಕ್ಕೆ ಬಂದಿದ್ದ ಗಣ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಹಾಲಿಸ್ಟರ್‌ ಸಭಾಂಗಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರಕ್ಕೆ ಪೊಂಗಲ್‌, ಕೇಸರಿ ಬಾತ್‌, ಮಧ್ಯಾಹ್ನದ ಊಟಕ್ಕೆ ಹೋಳಿಗೆ, ಪಲಾವ್‌, ಸಿಹಿ ಪೊಂಗಲ್‌, ಹಪ್ಪಳ, ಅನ್ನ, ತಿಳಿ ಸಾರು, ಕೋಸಂಬರಿ, ಪಲ್ಯ, ರಾತ್ರಿ ಊಟಕ್ಕೆ ಅನ್ನ ಸಾಂಬರು ಮತ್ತು ಪಲಾವ್‌ ಖಾದ್ಯಗಳನ್ನು ಮಾಡಿಸಲಾಗಿತ್ತು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡೋಲು ವಿದ್ವಾನ್‌ ಅಯ್ಯೂರು ನಾರಾಯಣಸ್ವಾಮಿ ಮತ್ತು ಕಲಾವಿದರು ವಾದ್ಯಗೋಷ್ಠಿ ನಡೆಸಿಕೊಟ್ಟರು. ಬೆಂಗಳೂರಿನ ಸಮುದಾಯ ರಂಗ ತಂಡದ ಕಲಾವಿದರು ‘ತುಘಲಕ್‌’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT