ಶ್ರೀನಿವಾಸಪುರ: ವಿಶ್ವಕರ್ಮರ ಕಲಾ ಕೌಶಲ ಸಮುದಾಯಕ್ಕೆ ಮಾದರಿ. ಸಮುದಾಯದ ಯುವ ಜನರು ವೃತ್ತಿಪರತೆ ಹೆಚ್ಚಿಸಿಕೊಳ್ಳಬೇಕು ಎಂದು ಉಪ ತಹಶೀಲ್ದಾರ್ ಮಲ್ಲೇಶ್ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ. ಮುನಿರೆಡ್ಡಿ ಮಾತನಾಡಿ, ವಿಶ್ವಕರ್ಮರು ತಮ್ಮ ಕಲಾ ನೈಪುಣ್ಯದ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಗಳಿಸಿದ್ದಾರೆ. ಅವರು ದೇವ ಶಿಲ್ಪಿಯಾಗಿ ಹಾಗೂ ಶಸ್ತ್ರಾಸ್ತ್ರ ತಯಾರಿಕಾ ನಿಪುಣರಾಗಿ ಪ್ರಸಿದ್ಧರಾಗಿದ್ದಾರೆ. ಅವರ ಜಯಂತಿ ವಿಶ್ವಕರ್ಮ ಸಮುದಾಯಕ್ಕೆ ಪ್ರೇರಣೆ ಎಂದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ವಿಶ್ವಕರ್ಮ ಮಾತನಾಡಿ, ‘ಸರ್ಕಾರದ ಸೌಲಭ್ಯ ಕೊರತೆಯಿಂದಾಗಿ ಸಮುದಾಯದ ಯುವಕರು ಕುಲವೃತ್ತಿಗೆ ಬೆನ್ನು ತೋರಿಸುತ್ತಿದ್ದಾರೆ. ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಈ ಸಮುದಾಯದ ನೆರವಿಗೆ ಬರಬೇಕು. ಸಮುದಾಯ ಶೈಕ್ಷಣಿಕವಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು’ ಎಂದರು.
ಕಂದಾಯ ನಿರೀಕ್ಷಕರಾದ ಗುರುರಾಜರಾವ್, ವಿಶ್ವನಾಥ್, ಗಾಯಿತ್ರಿ, ಸಲೀಂ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ರವೀಂದ್ರಾಚಾರಿ, ಶ್ರೀಕಂಠಾಚಾರಿ, ರತ್ನಾಚಾರಿ, ಕೆ.ಜಿ.ನಾರಾಯಣಾಚಾರಿ, ಆನಂದಬಾಬು, ಮಂಜುನಾಥಬಾಬು ಇದ್ದರು.