ಅರಾಭಿಕೊತ್ತನೂರು: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರಿಗೆ ಗ್ರಾಮದ ಶಾಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಿಪಿನ್ ರಾವತ್ರ ಸ್ಮರಣಾರ್ಥ ಮೌನಾಚರಣೆ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
‘ಈ ದೇಶ ಕಂಡ ಮಹಾನ್ ಚೇತನ ದೇಶದ ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಶತ್ರು ರಾಷ್ಟ್ರ ಚೀನಾದ ದಾಳಿ ಹಿಮ್ಮೆಟ್ಟಿಸುವಲ್ಲಿ ಹಾಗೂ ಪಾಕಿಸ್ತಾನದ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ನಲ್ಲಿ ಬಿಪಿನ್ ರಾವತ್ ನಿರ್ಣಾಯಕ ಪಾತ್ರ ವಹಿಸಿದ್ದರು’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಚ್ಚಿದಾನಂದ ಮೂರ್ತಿ ಸ್ಮರಿಸಿದರು.
‘ಮಹಾನ್ ದೇಶಪ್ರೇಮಿ ರಾವತ್ ಅವರ ನಿಧನವು ಅತ್ಯಂತ ನೋವಿನ ಸಂಗತಿಯಾಗಿದ್ದು, ಅವರಿಗೆ ದೇಶದ ಪ್ರತಿಯೊಬ್ಬರೂ ಋಣಿಯಾಗಿದ್ದೇವೆ. ಸೇನೆಯ ನೇತೃತ್ವ ವಹಿಸಿ ಸೈನಿಕರಲ್ಲಿ ಹೋರಾಟಕ್ಕೆ ಆತ್ಮಸ್ಥೈರ್ಯ ತುಂಬುತ್ತಿದ್ದ ರಾವತ್ ಅವರು ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೂ ಈ ಘಟನೆ ನಡೆದಿದೆ’ ಎಂದು ವಿಷಾದಿಸಿದರು.
ಶಾಲೆ ಎಸ್ಡಿಎಂಸಿ ಅಧ್ಯಕ್ಷ ಮಹೇಂದ್ರ, ಶಿಕ್ಷಕರಾದ ಭವಾನಿ, ಶ್ವೇತಾ, ಗೋಪಾಲಕೃಷ್ಣ, ಲೀಲಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಚಂದ್ರಶೇಖರ್ ಹಾಜರಿದ್ದರು.