ಕೋಲಾರ: ಸರ್ಕಾರಿ ನೌಕರರ ರಕ್ಷಣೆಗೆ ಸಂಘ ಸದಾ ಸಿದ್ಧವಿದೆ. ನೌಕರರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಸಂಘಕ್ಕೆ ದೂರು ನೀಡಿದರೆ ಸಂಘ ಕಾನೂನು ಕ್ರಮ ಕೈಗೊಳ್ಳುವುದು ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಮಾಜ ಘಾತುಕ ಶಕ್ತಿಗಳು ನೌಕರರನ್ನು ಬೆದರಿಸುವ ಕೆಲಸ ಮಾಡುತ್ತಿವೆ. ಅಂತಹ ಶಕ್ತಿಗಳ ವಿರುದ್ಧ ಸಂಘ ಹೋರಾಟ ನಡೆಸುತ್ತದೆ. ಸಮಸ್ಯೆ ನಿವಾರಣೆಗೆ ಸರ್ಕಾರದ ನಿರ್ದೇಶನದಂತೆ ಜಂಟಿ ಸಮಾಲೋಚನಾ ಸಮಿತಿ ರಚನೆ ಮಾಡಲಾಗಿದೆ. ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.
ಸಂಘದ ಕಟ್ಟಡ ನವೀಕರಣಕ್ಕೆ ರಾಜ್ಯ ಸಂಘದ ಅಧ್ಯಕ್ಷ ಷಡಕ್ಷರಿ ಅವರು ₹1 ಕೋಟಿ ನೀಡಲು ಒಪ್ಪಿಗೆ ನೀಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಪಡೆದು ಕಟ್ಟಡನವೀಕರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ₹1.75 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಕೆಜಿಐಡಿ ಕಚೇರಿಯಲ್ಲಿ ಶಿಕ್ಷಕರ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬ, ಖಜಾನೆಯಲ್ಲಿ ನೌಕರರ ವೇತನ ಬಿಲ್ಲುಗಳನ್ನು ಕಾಲಮಿತಿಯಲ್ಲಿ ಮಾಡಿಕೊಡಬೇಕು. ಜಿಲ್ಲಾಡಳಿತ ಭವನಕ್ಕೆ ಬಸ್ ಸೌಕರ್ಯ ಒದಗಿಸುವುದು, ಸೇವಾ ಪುಸ್ತಕಗಳನ್ನು ಅಪ್ಡೇಟ್ ಮಾಡುವುದು, ವೈದ್ಯಕೀಯ ಬಿಲ್ಲುಗಳಲ್ಲಿನ ವಿಳಂಬ, ಶಿಶುಪಾಲನಾ ರಜೆ ಕುರಿತು ಇರುವ ಗೊಂದಲ ನಿವಾರಿಸಲು ಸೂಕ್ತ ಸುತ್ತೋಲೆ ಹೊರಡಿಸುವಂತೆ, ನಿವೃತ್ತ ನೌಕರರ ಆರ್ಥಿಕ ಸೌಲಭ್ಯಗಳು ನಿಗದಿತ ಸಮಯಕ್ಕೆ ಸಿಗುವಂತೆ ಕ್ರಮವಹಿಸುವ ಸಮಸ್ಯೆಗಳನ್ನು ಪದಾಧಿಕಾರಿಗಳು ಪ್ರಸ್ತಾಪಿಸಿ, ಜಂಟಿ ಸಮಾಲೋಚನಾ ಸಭೆಯಲ್ಲಿ ಚರ್ಚಿಸುವಂತೆ ಒತ್ತಾಯಿಸಿದರು.
ಶಿಕ್ಷಕ ಗೆಳೆಯರ ಬಳಗದ ನಾರಾಯಣಸ್ವಾಮಿ, ನೌಕರರ ಸಂಘದ ಖಜಾಂಚಿ ವಿಜಯ್, ಉಪಾಧ್ಯಕ್ಷ ಪುರುಷೋತ್ತಮ್, ಅಜಯ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ನೌಕರರ ಸಂಘದ ಪಧಾಧಿಕಾರಿಗಳಾದ ಅನಿಲ್, ಮಂಜುನಾಥ್, ನಾಗರಾಜ್, ಶ್ರೀನಿವಾಸಲು, ವಿಜಯಮ್ಮ, ವೆಂಕಟಶಿವಪ್ಪ, ಚಂದ್ರಪ್ಪ, ಎನ್ಎಸ್.ಭಾಗ್ಯ, ಕಲಾವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.