ಮುಳಬಾಗಿಲು: ‘ಅಂಗವಿಕಲ ಮಕ್ಕಳಿಗೆ ಶಾಲೆ ಮತ್ತು ಸಮುದಾಯದಲ್ಲಿ ಅನುಕಂಪ ತೋರಿಸದೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿಕೊಟ್ಟರೆ ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಸಾಧನೆ ಮಾಡುತ್ತಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಗಿರಿಜೇಶ್ವರಿ ದೇವಿ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಸಮನ್ವಯ ಶಿಕ್ಷಣದ ಶಾಲಾ ಸಿದ್ಧತಾ ಕೇಂದ್ರದಲ್ಲಿ ಶನಿವಾರ ನಡೆದ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಯೋಜನಾ ಸಹಾಯಕ ಉಪ ಸಮನ್ವಯಾಧಿಕಾರಿ ಎಚ್.ಕೆ. ಮೋಹನ್ ಬಾಬು ಮಾತನಾಡಿ, ಶಾಲೆಗಳಲ್ಲಿ ದಾಖಲಾಗಿರುವ ಗೃಹಾಧಾರಿತ ಮಕ್ಕಳು ಹಾಗೂ ಥೆರಪಿ ಅವಶ್ಯಕತೆ ಇರುವ ಅಂಗವಿಕಲ ಮಕ್ಕಳಿಗೆ ವಾರದಲ್ಲಿ ಎರಡು ದಿನ ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿರುವ ಕೇಂದ್ರದಲ್ಲಿ ಥೆರಪಿ ಮತ್ತು ಭೌತಿಕ ಚಿಕಿತ್ಸೆ ನೀಡಲಾಗುವುದು. ಥೆರಪಿಯ ಅವಶ್ಯಕತೆ ಇರುವ ಮಕ್ಕಳ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ. ಶ್ರೀನಿವಾಸ್ ಮಾತನಾಡಿ, ಶಾಲಾ ಸಿದ್ಧತಾ ಕೇಂದ್ರ, ಸಮನ್ವಯ ಶಿಕ್ಷಣದ ಸಂಪನ್ಮೂಲ ಕೇಂದ್ರವು ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದರು.
2021-22ನೇ ಸಾಲಿನ ಸಮನ್ವಯ ಶಿಕ್ಷಣದ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಸಿದ್ಧತಾ ಕೇಂದ್ರದ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಮೊದಲ ದಿನವೇ 15 ಅಂಗವಿಕಲ ಮಕ್ಕಳಿಗೆ ಥೆರಪಿ, ಭೌತಿಕ ಚಿಕಿತ್ಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ವೆಂಕಟಗಿರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಪದಾಧಿಕಾರಿಗಳಾದ ಮಂಜುನಾಥ, ಬಲ್ಲ ಮಂಜುನಾಥ, ಕೃಷ್ಣಮೂರ್ತಿ, ಕ್ರೀಡಾ ಕಾರ್ಯದರ್ಶಿಗಳಾದ ಎನ್. ಆನಂದ್ ಹಾಜರಿದ್ದರು.