ಶ್ರೀನಿವಾಸಪುರ: ರೈತರು ತಮ್ಮ ಜಮೀನಿನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕೆ.ಬಿ. ಬಾಲಚಂದ್ರ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಹಳ್ಳಿ ಹಾಡು ಸಾಂಸ್ಕೃತಿಕ ಜಾನಪದ ಕಲಾ ಸಂಘದ ಕಲಾವಿದರು ರೈತರಿಗೆ ಅರಿವು ಕಾರ್ಯಕ್ರಮದಡಿ ಬುಧವಾರ ಪ್ರದರ್ಶಿಸಿದ ಬೀದಿನಾಟಕ ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಗಿಡ ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಶ್ರೀಗಂಧ, ರಕ್ತಚಂದನ, ಹಲಸು, ಹೆಬ್ಬೇವು ಮತ್ತಿತರ ಮರಗಳನ್ನು ಬೆಳೆಸಲು ಸಾಮಾಜಿಕ ಅರಣ್ಯ ಇಲಾಖೆಯಿಂದ ಆರ್ಥಿಕ ನೆರವು ನೀಡಲಾಗುವುದು. ಎಕರೆಯೊಂದರಲ್ಲಿ 160 ರಿಂದ 200 ಮರಗಳನ್ನು ಬೆಳೆಸಬಹುದು. ಗಿಡಗಳನ್ನು ಅಭಿವೃದ್ಧಿಪಡಿಸಲು ತಲಾ ₹ 80 ನೀಡಲಾಗುವುದು ಎಂದು ಹೇಳಿದರು.