ಮಾಲೂರು: ‘ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ’ ಎಂದು ಸಂಸ್ಕೃತಿ ಚಿಂತಕ ಹಾ.ಮ. ರಾಮಚಂದ್ರ ತಿಳಿಸಿದರು.
ಪಟ್ಟಣದಲ್ಲಿ ಚೈತನ್ಯ ಕಲಾನಿಕೇತನ ಸಂಸ್ಥೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ತಿಂಗಳ ಸಾಹಿತ್ಯ ಸಂಭ್ರಮ ಹಾಗೂ ಬೋಧಿ ರನ್ನ ಪ್ರಶಸ್ತಿ ಪುರಸ್ಕೃತ ಪದ್ಮಾಲಯ ನಾಗರಾಜ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಯಾವುದೇ ಜಾತಿಗೆ ಕೆಲಸ ಮಾಡಿದವರಲ್ಲ. ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ ಎಂದರು.
ಪದ್ಮಾಲಯ ನಾಗರಾಜ್ ಮಾತನಾಡಿ, ದೇಶದ ಪ್ರತಿ ಹಳ್ಳಿಯಲ್ಲೂ ಜಾತಿ ಜಾತಿಗಳ ನಡುವೆ ಹಾಗೂ ಕೋಮುಗಳ ನಡುವೆ ತಾರತಮ್ಯವಿದೆ. ಸಮಾನತೆಯ ಕನಸು ಕನಸಾಗಿಯೇ ಉಳಿದಿದೆ. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರ ಮನಸ್ಸು ಬದಲಾವಣೆಯಾಗಬೇಕು ಎಂದು ತಿಳಿಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಮಾತನಾಡಿ, ಯಾವುದೇ ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭ. ಆದರೆ, ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಸಾಹಿತ್ಯ, ಕಲೆ, ಸಂಸ್ಕೃತಿ, ಮಹಿಳಾ ಸಬಲೀಕರಣ, ಶಿಕ್ಷಣ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಚೈತನ್ಯ ಕಲಾನಿಕೇತನದ ಕಾರ್ಯ ಶ್ಲಾಘನೀಯ ಎಂದರು.
ಚೈತನ್ಯ ಕಲಾನಿಕೇತನದ ಸಂಸ್ಥಾಪಕ ಅಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಂ. ವೆಂಕಟೇಶ್, ರಾಜ್ಯ ಎಸ್.ಸಿ ಮತ್ತು ಎಸ್.ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೊಡ್ಡಿ ನಾರಾಯಣಸ್ವಾಮಿ ಮಾತನಾಡಿದರು.