ಮುಳಬಾಗಿಲು: ತಾಲ್ಲೂಕಿನ ಅಸಲಿ ಅತ್ತಿಕುಂಟೆ ಗ್ರಾಮಸ್ಥರು ವಿರೂಪಾಕ್ಷಿ ಗ್ರಾಮದಲ್ಲಿನ ಶ್ರೀಮಾರೆಮ್ಮ ದೇವಿ ಉಟ್ಲು ಜಾತ್ರೆ ಅಂಗವಾಗಿ ಎತ್ತಿನಬಂಡಿ ಮೂಲಕ ತಂಬಿಟ್ಟು ದೀಪ ಬೆಳಗುವ ಮೂಲಕ ಹಬ್ಬ ಆಚರಿಸಿದರು.
ಎತ್ತಿನಬಂಡಿಗೆ ತೇರಿನ ರೀತಿಯಲ್ಲಿ ಅಲಂಕಾರ ಮಾಡಿ ಬಣ್ಣದ ಬಟ್ಟೆಗಳನ್ನು ಸುತ್ತಿದ್ದರು. ಮಾವಿನ ತೋರಣ, ಬಾಳೆ ದಿಂಡುಗಳಿಂದ ಸಿಂಗಾರ ಮಾಡಲಾಗಿತ್ತು. ಪ್ರತಿವರ್ಷ ಯುಗಾದಿ ಹಬ್ಬ ಮುಗಿದ ಒಂಬತ್ತು ದಿನಗಳ ನಂತರ ದೇವಿಗೆ ತಂಬಿಟ್ಟು ದೀಪೋತ್ಸವ ನಡೆಯುತ್ತದೆ.
ಗ್ರಾಮದಲ್ಲಿನ ಮಾರೆಮ್ಮ ದೇವಿ ಅಸಲಿ ಅತ್ತಿಕುಂಟೆ ಗ್ರಾಮಕ್ಕೆ ಸೇರಿದ ಹೆಣ್ಣುಮಗಳೆಂಬ ಭಾವನೆ ಇದೆ. ಆದ್ದರಿಂದ ಪ್ರತಿವರ್ಷ ಇಲ್ಲಿಂದ ಎತ್ತಿನಬಂಡಿಯ ತೇರಿನಲ್ಲಿ ಪಾನಕದ ಬಿಂದಿಗೆಗಳನ್ನು ಇಟ್ಟುಕೊಂಡು ತೇರಿನ ಹಿಂಭಾಗದಲ್ಲಿ ಮಹಿಳೆಯರು ತಂಬಿಟ್ಟು ದೀಪಗಳನ್ನು ಹೊತ್ತು ದೇವಾಲಯಕ್ಕೆ ಹೋಗಿ ಹರಕೆ ತೀರಿಸುವ ಸಂಪ್ರದಾಯವಿದೆ.