ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್, ಖಜಾಂಚಿಯಾಗಿ ಕೆ.ವಿಜಯ್ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಡಿ.ಸುರೇಶ್ಬಾಬು ಆಯ್ಕೆಯಾದರು.
ತೀವ್ರ ಕುತೂಹಲ ಕೆರಳಿಸಿದ್ದ ನೌಕರರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಇಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಶೋಕ್ 34 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಕೆ.ಎನ್.ಮಂಜುನಾಥ್ 30 ಮತ ಗಳಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್ ಅವರ ಬಣದಿಂದ ಖಜಾಂಚಿ ಸ್ಥಾನಕ್ಕೆ ಕಣಕ್ಕಿಳಿದಿದ್ದ ಕೆ.ವಿಜಯ್ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಸರ್ವೆ ಇಲಾಖೆಯ ಡಿ.ಸುರೇಶ್ಬಾಬು ಜಯ ಗಳಿಸಿದರು.
ವಿಜಯ್ 35 ಮತ ಗಳಿಸಿದರೆ ಅವರ ಪ್ರತಿಸ್ಪರ್ಧಿ ಮಂಜುನಾಥ್ ಅವರಿಗೆ 29 ಮತ ಲಭಿಸಿದವು. ಡಿ.ಸುರೇಶ್ಬಾಬು ಅವರಿಗೆ 48 ಮತ ಹಾಗೂ ಅವರ ಪ್ರತಿಸ್ಪರ್ಧಿ ಎಂ.ಸುರೇಶ್ ಬಾಬು ಅವರಿಗೆ 16 ಗಳಿಸಿದರು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿಜೇತರ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ನೌಕರರ ಜಾತಿ: ಫಲಿತಾಂಶ ಘೋಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಅಶೋಕ್, ‘ನನ್ನನ್ನು ಜಾತಿ ಆಧಾರದಲ್ಲಿ ಗುರುತಿಸುವ ಪ್ರಯತ್ನ ನಡೆಯಿತು. ಆದರೆ, ನನ್ನದು ಸರ್ಕಾರಿ ನೌಕರರ ಜಾತಿ. ನಾನೆಂದು ನೌಕರರಲ್ಲಿ ಜಾತಿ ಪರಿಗಣನೆ ಮಾಡುವುದಿಲ್ಲ’ ಎಂದರು.
‘ಜಿಲ್ಲೆಯ ನೌಕರರು ನನ್ನನ್ನು ಆಯ್ಕೆ ಮಾಡಿದ್ದು, ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ವೇತನ ವಿಳಂಬ, ಬಡ್ತಿಯಲ್ಲಿ ವಿಳಂಬ, ವೇತನ ತಾರತಮ್ಯ ಹೀಗೆ ನೌಕರರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ನೌಕರರ ಸಮಸ್ಯೆಗಳ ಪರಿಹಾರಕ್ಕೆ ಬದ್ಧತೆಯಿಂದ ದುಡಿಯುತ್ತೇನೆ’ ಎಂದು ಭರವಸೆ ನೀಡಿದರು.