ಕೋಲಾರ: ‘ಧರ್ಮಕ್ಕೆ ಮೂಲ ಬೇರು ಕರುಣೆಯಾಗಿದೆ. ಅಂತಹ ಕರುಣೆ ಇರುವ ನಾರಿ ಶಕ್ತಿಯಿಂದ ಸಂಘ ಮತ್ತಷ್ಟು ಸದೃಢವಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ‘ಸಂಘದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ದಿನ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಈ ದಿನವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸೋಣ. ಸಾಧಕ ಮಹಿಳಾ ನೌಕರರನ್ನು ಆಯ್ಕೆ ಮಾಡಿ ಸನ್ಮಾನಿಸೋಣ’ ಎಂದು ತಿಳಿಸಿದರು.
‘ಮಹಾಭಾರತದಲ್ಲಿ ಶಕ್ತಿಯಿದ್ದರೂ ಕರುಣೆಯಿಲ್ಲದ ಕರ್ಣ, ದುರ್ಯೋಧನ ಸೋತರು. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕರುಣೆ ತೋರದ ಕರ್ಣ ಮತ್ತು ದುರ್ಯೋಧನ ಹೇಗೆ ನಾಶವಾದರು ಎಂಬುದನ್ನು ಧರ್ಮ ಸಾಬೀತುಪಡಿಸಿದೆ. ಕರುಣೆಗೆ ಪ್ರತಿರೂಪವಾದ ಮಹಿಳೆಯರಿಗೆ ಸಿಗಬೇಕಾದ ಗೌರವವನ್ನು ಸಂಘ ನೀಡಿದೆ’ ಎಂದರು.
‘ಮಹಿಳೆಯರು ತಾಯಿಯಾಗಿ, ತಂಗಿಯಾಗಿ, ಮನೆಯೊಡತಿಯಾಗಿ ಉಪವಾಸವಿದ್ದು, ಮಕ್ಕಳನ್ನು ಪೋಷಿಸುವ ಮಾತೆಯಾಗಿ ನಮ್ಮನ್ನು ಕಾಪಾಡುತ್ತಿದ್ದಾರೆ. ಅಂತಹ ಕರುಣಾಮಯಿ ಹೆಣ್ಣಿಗೆ ಸಂಘದಲ್ಲಿ ಅಗತ್ಯ ಸ್ಥಾನಮಾನ ನೀಡುವ ಮೂಲಕ ಸಂಘಟನೆ ಬಲಪಡಿಸೋಣ’ ಎಂದು ಸಲಹೆ ನೀಡಿದರು.
‘ಶಿಕ್ಷಣವು ಸಮಾನತೆಗೆ ಅಸ್ತ್ರವಾಗಿದೆ. ಸಂಘದಲ್ಲಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಬಲರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಬಾಲ್ಯವಿವಾಹ ನಡೆದಿವೆ. ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ 180 ಮಂದಿ ಜೈಲಿನಲ್ಲಿದ್ದಾರೆ. ಮಹಿಳೆಯರ ರಕ್ಷಣೆಗೆ ಇಲಾಖೆಗಳಲ್ಲಿ ಅಂತರಿಕ ದೂರು ಸಮಿತಿ ರಚನೆಯಾಗಬೇಕು’ ಎಂದು ಸಂಘದ ಕಾರ್ಯದರ್ಶಿ ವಿಜಯಮ್ಮ ಕೋರಿದರು.
ಸಂಘದ ಉಪಾಧ್ಯಕ್ಷರಾದ ಅಜಯ್ಕುಮಾರ್, ಪುರುಷೋತ್ತಮ್, ಎಂ.ನಾಗರಾಜ್, ಮಂಜುನಾಥ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಎಸ್.ಭಾಗ್ಯ, ಕಲಾವತಿ, ಸುನಂದಾ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಪ್ರೇಮಾ, ಪದಾಧಿಕಾರಿಗಳು ಪಾಲ್ಗೊಂಡರು.