ಕೋಲಾರ: ‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೊಸ ರೀತಿಯದ್ದಾಗಿದೆ. ಆದ್ದರಿಂದ ಮಕ್ಕಳಿಗೆ ಒಎಂಆರ್ ಶೀಟ್, ಬಹು ಆಯ್ಕೆ ಪ್ರಶ್ನೆಗಳ ಕುರಿತು ಅರಿವು ನೀಡುವ ಅಗತ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ರಾಮಕೃಷ್ಣಪ್ಪ ಸೂಚಿಸಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರೀಕ್ಷೆ ಸಿದ್ಧತೆ ಪರಿಶೀಲಿಸಿ ಮಾತನಾಡಿ, ‘ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವ ವಾತಾವರಣ ಸೃಷ್ಟಿಸುವುದು ಶಿಕ್ಷಕರ ಕರ್ತವ್ಯ’ ಎಂದರು.
‘ಪರೀಕ್ಷೆಯಷ್ಟೇ ಮಕ್ಕಳ ಸುರಕ್ಷತೆಯೂ ಆದ್ಯತೆಯಾಗಿದೆ. ಮಕ್ಕಳಿಗೆ ಕೊರೊನಾ ಸೋಂಕು ತಾಗದಂತೆ ಪರೀಕ್ಷಾ ಕೇಂದ್ರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳು ಪರೀಕ್ಷೆ ಬರೆಯಲು ಕೇಂದ್ರದೊಳಗೆ ಬಂದಾಗ ಆರಂಭದಲ್ಲೇ ಅವರ ಕೈಗಳಿಗೆ ಸ್ಯಾನಿಟೈಸರ್ ಹಾಕಿ. ಥರ್ಮಲ್ ಸ್ಕ್ರೀನಿಂಗ್ ನಂತರವೇ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಸೋಂಕಿನ ಸಾಮಾನ್ಯ ಲಕ್ಷಣ ಕಂಡುಬಂದರೆ ಅಂತಹವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ’ ಎಂದು ತಿಳಿಸಿದರು.
‘ಮಕ್ಕಳು ಶಾಲೆಗಳಿಗೆ ಬಾರದ ಕಾರಣ ಶೌಚಾಲಯಗಳು ಬಳಕೆಯಾಗದೆ ಕೊಳಕು ತುಂಬಿರುವ ಸಾಧ್ಯತೆಯಿದ್ದು, ಅವುಗಳನ್ನು ಸ್ವಚ್ಛಗೊಳಿಸಿ. ಶೌಚಾಲಯಗಳು ಸೋಂಕು ರಹಿತವಾಗಿರಬೇಕು. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸರಿ ಇರಬೇಕು’ ಎಂದು ಹೇಳಿದರು.